ಸಂವಿಧಾನ ಯಾರನ್ನೂ ನಾಯಿ, ಸಿಂಹವಾಗಿ ಪರಿಗಣಿಸಿಲ್ಲ: ಭಾಗವತ್ ಹೇಳಿಕೆಗೆ ಉವೈಸಿ ಪ್ರತಿಕ್ರಿಯೆ
“ಆರೆಸ್ಸೆಸ್ ಗೆ ಸಂವಿಧಾನದ ಬಗ್ಗೆ ನಂಬಿಕೆಯಿಲ್ಲ”
ಹೈದರಾಬಾದ್, ಸೆ.9: ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ, "ಆ ಸಂಘಟನೆಗೆ ದೇಶದ ಸಂವಿಧಾನದ ಮೇಲೆ ನಂಬಿಕೆ ಇಲ್ಲ" ಎಂದಿದ್ದಾರೆ.
"ಸಿಂಹ ಏಕಾಂಗಿಯಾಗಿದ್ದರೆ ಕಾಡುನಾಯಿ ಕೂಡಾ ದಾಳಿ ಮಾಡಿ ಸಿಂಹವನ್ನು ಕೊಲ್ಲಬಲ್ಲದು ಎನ್ನುವುದನ್ನು ನಾವು ಮರೆಯಬಾರದು" ಎಂದು ಚಿಕಾಗೊ ಸಮಾರಂಭವೊಂದರಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಉವೈಸಿ, "ಯಾರು ನಾಯಿ ಹಾಗೂ ಯಾರು ಸಿಂಹ?, ಭಾರತೀಯ ಸಂವಿಧಾನ ಪ್ರತಿಯೊಬ್ಬರನ್ನೂ ಮನುಷ್ಯರು ಎಂದು ವ್ಯಾಖ್ಯಾನಿಸಿದೆ. ಯಾರನ್ನೂ ನಾಯಿ ಅಥವಾ ಸಿಂಹವಾಗಿ ಪರಿಗಣಿಸಿಲ್ಲ. ಆರೆಸ್ಸೆಸ್ ನ ಸಮಸ್ಯೆಯೆಂದರೆ ಅವರಿಗೆ ಭಾರತೀಯ ಸಂವಿಧಾನದ ಮೇಲೆ ನಂಬಿಕೆ ಇಲ್ಲ" ಎಂದು ಟೀಕಿಸಿದರು.
"ಜನರನ್ನು ನಾಯಿಗೆ ಹೋಲಿಸುವ ಮತ್ತು ತಮ್ಮನ್ನು ಹುಲಿಗೆ ಹೋಲಿಸಿಕೊಳ್ಳುವಂಥ ಭಯಂಕಾರವಾದ ಕಲ್ಪನೆಗಳನ್ನು ಆರೆಸ್ಸೆಸ್ ಹೊಂದಿದೆ" ಎಂದು ಉವೈಸಿ ವಾಗ್ದಾಳಿ ನಡೆಸಿದ್ದಾರೆ. ಇದು 90 ವರ್ಷಗಳಿಂದ ಆರೆಸ್ಸೆಸ್ನ ಭಾಷೆ. ಭಾಗವತ್ ಹೇಳಿಕೆ ಅಚ್ಚರಿ ತಂದಿಲ್ಲ. ಇಂತಹ ದುಷ್ಟ ಭಾಷೆಯನ್ನು ಭಾರತದ ಜನ ತಿರಸ್ಕರಿಸುತ್ತಾರೆ ಎಂದವರು ಹೇಳಿದ್ದಾರೆ.