ಸಹೋದ್ಯೋಗಿಗಳಿಂದಲೇ ಎಚ್ಡಿಎಫ್ಸಿ ಬ್ಯಾಂಕ್ ಉಪಾಧ್ಯಕ್ಷರ ಕೊಲೆ: ನಾಲ್ವರು ಆರೋಪಿಗಳ ಬಂಧನ
ಮುಂಬೈ, ಸೆ.10: ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಎಚ್ಡಿಎಫ್ಸಿ ಬ್ಯಾಂಕ್ ಉಪಾಧ್ಯಕ್ಷ ಸಿದ್ಧಾರ್ಥ ಸಾಂಘ್ವಿ ಮೃತದೇಹ ರವಿವಾರ ಕಲ್ಯಾಣ ನಗರದ ಹಾಜಿ ಮಲಂಗ್ ಎಂಬಲ್ಲಿ ಪತ್ತೆಯಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಅರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸಿದ್ಧಾರ್ಥ ಸಾಂಘ್ವಿಯವರನ್ನು ಕೊಲೆ ಮಾಡಲು ಸಹೋದ್ಯೋಗಿಗಳೇ ಸುಪಾರಿ ನೀಡಿರುವುದಾಗಿ ಪ್ರಮುಖ ಆರೋಪಿ , ಟ್ಯಾಕ್ಸಿ ಚಾಲಕ ಸರ್ಫ್ರಾಝ್ ಖಾನ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾನ್ನನ್ನು ನವಿ ಮುಂಬೈ ಕ್ರೈಂಬ್ರಾಂಚ್ ಪೊಲೀಸರು ಕೋಪರ್ಖೈರೇನ್ ಎಂಬಲ್ಲಿಂದ ಬಂಧಿಸಲು ಸಫಲರಾಗಿದ್ದಾರೆ. ಮೃತ ಸಾಂಘ್ವಿಯವರ ಕಾರಿನ ಬಳಿ ಖಾನ್ ನಿಂತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದ್ದು ಆತನ ಬಂಧನಕ್ಕೆ ನೆರವಾಗಿದೆ .ವಿಚಾರಣೆ ವೇಳೆ ನಾಂದೇಡ್ ಮೂಲದ ಸರ್ಫ್ರಾಝ್ ಖಾನ್ ತಾನು ಕೊಲೆ ಮಾಡಲು ಸುಫಾರಿ ಪಡೆದಿದ್ದು ಸಾಂಘ್ವಿಯವರನ್ನು ಕೊಲೆಗೈದು ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದ ಮತ್ತು ಆತ ನೀಡಿದ ಮಾಹಿತಿಯಂತೆ ಇತರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಲ್ಲಿ ಇಬ್ಬರು ಮೃತ ಸಾಂಘ್ವಿ ಕಾರ್ಯ ನಿರ್ವಹಿಸುತ್ತಿದ್ದ ಕಮಲಾ ಮಿಲ್ ಶಾಖಾ ಕಚೇರಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳಾಗಿದ್ದಾರೆ ಎಂದು ಹೇಳಲಾಗಿದೆ. ಕೊಲೆ ಮಾಡಿದ ಬಳಿಕ ಸಾಂಘ್ವಿಯವರ ವಾಹನದಲ್ಲೇ ಮೃತದೇಹವನ್ನು ಸಾಗಿಸಿ ನಿರ್ಜನ ಪ್ರದೇಶದಲ್ಲಿ ಎಸೆದಿರುವುದಾಗಿ ಖಾನ್ ಒಪ್ಪಿಕೊಂಡಿದ್ದ.
ಸಿದ್ಧಾರ್ಥ ಸಾಂಘ್ವಿಯವರಿಗೆ ಇತ್ತೀಚೆಗೆ ಬ್ಯಾಂಕ್ನ ಉಪಾಧ್ಯಕ್ಷ ಹುದ್ದೆಗೆ ಭಡ್ತಿ ದೊರೆತಿದ್ದು ಇದರಿಂದ ಮತ್ಸರಗೊಂಡಿದ್ದ ಸಹೋದ್ಯೋಗಿಗಳೇ ಕೊಲೆಗೆ ಸುಪಾರಿ ನೀಡಿದ್ದರು ಎಂದು ವರದಿಯಾಗಿದೆ. ವಿಚಾರಣೆ ಸಂದರ್ಭ ಖಾನ್ ಹಲವು ಬಾರಿ ಹೇಳಿಕೆ ಬದಲಿಸಿ ಪೊಲೀಸರನ್ನು ಗೊಂದಲಕ್ಕೆ ಸಿಲುಕಿಸಿದ್ದ. ಮೊದಲು ಓರ್ವ ಮಹಿಳೆ ತನಗೆ ಸುಪಾರಿ ನೀಡಿದ್ದಳು ಎಂದಿದ್ದ. ಆಗ ಪೊಲೀಸರು ಸಾಂಘ್ವಿಯವರ ಪತ್ನಿ ಸೇರಿದಂತೆ ಹಲವು ಮಹಿಳೆಯರ ಫೋಟೋ ತೋರಿಸಿದ್ದರು. ಆಗ ಹೇಳಿಕೆ ಬದಲಿಸಿದ್ದ ಖಾನ್, ದರೋಡೆ ನಡೆಸಲು ಯತ್ನಿಸಿದಾಗ ಸಾಂಘ್ವಿ ಪ್ರತಿರೋಧ ಒಡ್ಡಿದರು. ಆಗ ಕೊಲೆ ಮಾಡಿರುವುದಾಗಿ ತಿಳಿಸಿದ್ದ. ಅಂತಿಮವಾಗಿ ಸಿಸಿಟಿವಿ ಫೂಟೇಜ್ ಪರಿಶೀಲಿಸುವಾಗ ಹೆಚ್ಚಿನ ಮಾಹಿತಿ ದೊರೆತಿದೆ ಎಂದು ವಲಯ 3ರ ಪೊಲೀಸ್ ಉಪಾಯುಕ್ತ ಅಭಿಲಾಷ್ ಕುಮಾರ್ ತಿಳಿಸಿದ್ದಾರೆ. ಅಲ್ಲದೆ ಕಮಲಾ ಮಿಲ್ ಶಾಖೆಯ ಉದ್ಯೋಗಿಗಳ ಹೇಳಿಕೆಯನ್ನೂ ಪೊಲೀಸರು ಪಡೆದಿದ್ದು ಇತ್ತೀಚಿನ ದಿನಗಳಲ್ಲಿ ಸಾಂಘ್ವಿ ನಿರ್ವಹಿಸಿರುವ ವ್ಯವಹಾರದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಬುಧವಾರ ಕಚೇರಿಯಿಂದ ಮನೆಗೆ ಹೊರಟ ಬಳಿಕ ಸಾಂಘ್ವಿ ಕಾಣೆಯಾಗಿದ್ದರು. ಅವರು ಪ್ರಯಾಣಿಸುತ್ತಿದ್ದ ಕಾರು ಎರಡು ದಿನಗಳ ಬಳಿಕ ಪತ್ತೆಯಾಗಿದ್ದು ಕಾರಿನಲ್ಲಿ ರಕ್ತದ ಕಲೆಗಳಿದ್ದವು. ಇದನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ. ಅಲ್ಲದೆ ಸಾಂಘ್ವಿಯವರ ಮೊಬೈಲ್ ಫೋನ್ ಕರೆಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.