ನ್ಯಾಶನಲ್ ಹೆರಾಲ್ಡ್ ಪ್ರಕರಣ: ಐಟಿ ನೋಟಿಸ್ ಪ್ರಶ್ನಿಸಿ ಸೋನಿಯಾ, ರಾಹುಲ್ ಸಲ್ಲಿಸಿದ ಮನವಿ ತಿರಸ್ಕೃತ
ಹೊಸದಿಲ್ಲಿ, ಸೆ. 10: ಹಣಕಾಸು ವರ್ಷ 2011-12ರ ತೆರಿಗೆಯನ್ನು ಮರು ಮೌಲ್ಯ ಮಾಪನ ಮಾಡುವಂತೆ ಕೋರಿದ ಆದಾಯ ತೆರಿಗೆ ನೋಟಿಸ್ ಅನ್ನು ಪ್ರಶ್ನಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಸಲ್ಲಿಸಿದ ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ. ತೆರಿಗೆ ಮರು ಮೌಲ್ಯ ಮಾನಪನ ಕೋರಿದ ಆದಾಯ ತೆರಿಗೆಯ ಮಾರ್ಚ್ನ ನೋಟಿಸ್ ಪ್ರಶ್ನಿಸಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಅವರ ಪಕ್ಷದ ಸಹೋದ್ಯೋಗಿ ಆಸ್ಕರ್ ಫೆರ್ನಾಂಡಿಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ಆದೇಶ ನೀಡಿದೆ.
2011-2012 ವರ್ಷಗಳಲ್ಲಿ ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮೂಲಕ ಗಳಿಸಿದ ಆದಾಯವನ್ನು ಅವರು ಬಹಿರಂಗಪಡಿಸಿಲ್ಲ ಎಂದು ಆರೋಪಿಸಲಾಗಿದೆ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಯಂಗ್ ಇಂಡಿಯಾದ ಪ್ರಮುಖ ಪಾಲುದಾರರು. ಯಂಗ್ ಇಂಡಿಯಾ ಅಸೋಸಿಯೇಟ್ ಜರ್ನಲ್ ಲಿಮಿಟೆಡ್ (ಎಜೆಎಲ್) ಅನ್ನು ಸ್ವಾಧೀನಪಡಿಸಿಕೊಂಡಿದೆ. ನ್ಯಾಶನಲ್ ಹೆಲಾಲ್ಡ್ ದಿನಪತ್ರಿಕೆಯನ್ನು ಎಜೆಎಲ್ ಪ್ರಕಟಿಸುತ್ತಿದೆ. ತೆರಿಗೆ ವಂಚಿಸಲು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸತ್ಯವನ್ನು ಮರೆ ಮಾಚುತ್ತಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ನ್ಯಾಯಾಲಯಕ್ಕೆ ತಿಳಿಸಿತು.