ಸರ್ಜಿಕಲ್ ಸ್ಟ್ರೈಕ್ ವೇಳೆ ಸೈನಿಕರಿಗೆ ನೆರವಾಗಿತ್ತು ಚಿರತೆಗಳ ಮಲ, ಮೂತ್ರ !
ಪುಣೆ, ಸೆ.12: ಎರಡು ವರ್ಷಗಳ ಹಿಂದೆ ಸರ್ಜಿಕಲ್ ದಾಳಿ ನಡೆಸುವ ವೇಳೆ ನಾಯಿಗಳನ್ನು ದೂರವಿರಿಸಲು ಅವುಗಳತ್ತ ಚಿರತೆಗಳ ಮಲ, ಮೂತ್ರವನ್ನು ಭಾರತೀಯ ಸೇನಾ ಪಡೆಯ ಸಿಬ್ಬಂದಿ ಎಸೆದಿದ್ದರೆಂಬ ಕುತೂಹಲಕಾರಿ ಮಾಹಿತಿಯನ್ನು ಮಾಜಿ ನಾಗ್ರೊತ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಜೇಂದ್ರ ನಿಂಬೋರ್ಕರ್ ಹೇಳಿದ್ದಾರೆ.
ಸರ್ಜಿಕಲ್ ದಾಳಿಯ ವೇಳೆ ಅವರ ಸೇವೆಯನ್ನು ಪರಿಗಣಿಸಿ ನಗರದ ಥೊರ್ಲೆ ಬಾಜಿರಾವ್ ಪೇಶ್ವೆ ಪ್ರತಿಷ್ಠಾನ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ನೌಶೇರಾ ಸೆಕ್ಟರಿನಲ್ಲಿ ಬ್ರಿಗೇಡ್ ಕಮಾಂಡರ್ ಆಗಿದ್ದ ನಿಂಬೋರ್ಕರ್ ತಮ್ಮ ಪ್ರದೇಶದಲ್ಲಿ ಚಿರತೆಗಳು ನಾಯಿಗಳ ಮೇಲೆ ಆಗಾಗ ದಾಳಿ ನಡೆಸುತ್ತಿದ್ದುದರಿಂದ ನಾಯಿಗಳು ರಾತ್ರಿ ಹೊತ್ತು ಎಲ್ಲೂ ಹೊರಗೆ ಹೋಗುತ್ತಿರಲಿಲ್ಲವೆಂಬುದನ್ನು ಅರಿತಿದ್ದರು. ಸರ್ಜಿಕಲ್ ದಾಳಿಗಳ ವೇಳೆ ಗ್ರಾಮಗಳನ್ನು ದಾಟುವಾಗ ನಾಯಿಗಳು ಬೊಗಳಿ ಶತ್ರು ದೇಶದ ಸೈನಿಕರನ್ನು ಎಚ್ಚರಿಸಬಹುದೆಂಬುದನ್ನು ಅರಿತು ತಮ್ಮ ಜತೆ ಚಿರತೆಗಳ ಮಲಮೂತ್ರವನ್ನೂ ಸೇನಾ ಪಡೆಗಳು ತೆಗೆದುಕೊಂಡು ಹೋಗಿ ಗ್ರಾಮಗಳ ಹೊರಗೆ ಅವುಗಳನ್ನು ಚಿಮುಕಿಸಿದ್ದು ಇದು ನಾಯಿಗಳು ಹತ್ತಿರ ಬರುವುದನ್ನು ತಡೆದಿತ್ತು,'' ಎಂದು ಅವರು ಹೇಳಿದ್ದಾರೆ.
ಆಗಿನ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಈ ಸರ್ಜಿಕಲ್ ದಾಳಿಯನ್ನು ಬಹಳ ಗೌಪ್ಯವಾಗಿ ನಡೆಸಬೇಕೆಂದು ಹೇಳಿದ್ದರು ಎಂಬ ಮಾಹಿತಿಯನ್ನೂ ನಿಂಬೋರ್ಕರ್ ನೀಡಿದ್ದಾರೆ.
ಸಮಾರಂಭದಲ್ಲಿ ನಿಂಬೋರ್ಕರ್ ಅವರಿಗೆ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಮನೋಹರ್ ಜೋಷಿ ಪ್ರದಾನಗೈದರು.