ಮಹಾರಾಷ್ಟ್ರ ಸರಕಾರದ ಸವಲತ್ತುಗಳಿಂದ ಲಾಭ ಗಳಿಸಲಿರುವ ಜಿಯೋ ಇನ್ಸ್ಟಿಟ್ಯೂಟ್
ಹೊಸದಿಲ್ಲಿ, ಸೆ.12: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಇತ್ತೀಚೆಗೆ ಸರ್ವಶ್ರೇಷ್ಠ ಶಿಕ್ಷಣ ಸಂಸ್ಥೆಗಳು (ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್) ಎಂಬ ಬಿರುದನ್ನು ನೀಡಿದ ಗ್ರೀನ್ಫೀಲ್ಡ್ ಸಂಸ್ಥೆಗಳಿಗೆ ಮಹಾರಾಷ್ಟ್ರ ಸರಕಾರ ಜಮೀನು ಮತ್ತು ಆರ್ಥಿಕ ಸಹಾಯವೊದಗಿಸುವುದು ಎಂದು ಘೋಷಿಸಿದೆ.
ರಿಲಯನ್ಸ್ ಫೌಂಡೇಶನ್ನಿನ ಇನ್ನೂ ಅಸ್ತಿತ್ವದಲ್ಲಿಯೇ ಇಲ್ಲದ ಜಿಯೋ ಇನ್ಸ್ಟಿಟ್ಯೂಟಿಗೂ ಶ್ರೇಷ್ಠ ಶಿಕ್ಷಣ ಸಂಸ್ಥೆ ಬಿರುದು ದೊರಕಿರುವುದರಿಂದ ಹಾಗೂ ಈ ಬಿರುದು ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಅದೊಂದೇ ಗ್ರೀನ್ ಫೀಲ್ಡ್ ಸಂಸ್ಥೆಯಾಗಿರುವುದರಿಂದ ಮಹಾರಾಷ್ಟ್ರ ಸರಕಾರ ಘೋಷಿಸಿದ ಆರ್ಥಿಕ ಸವಲತ್ತುಗಳು ಹಾಗೂ ಜಮೀನು ಈ ಸಂಸ್ಥೆಗೆ ಲಭ್ಯವಾಗಲಿದೆ.
ಮುಂಬೈ ಮೆಟ್ರೋಪಾಲಿಟನ್ ಪ್ರಾಂತ್ಯದ ಕರ್ಜಟ್ ತಾಲೂಕಾದಲ್ಲಿನ 800 ಎಕರೆ ಪ್ರದೇಶದಲ್ಲಿ ಜಿಯೋ ಇನ್ಸ್ಟಿಟ್ಯೂಟ್ ತಲೆಯೆತ್ತಲಿರುವುದು ಎಂಬ ಮಾಹಿತಿ ಈಗಾಗಲೇ ಇದೆ. ರಾಜ್ಯದಲ್ಲಿ ವಿಶ್ವದರ್ಜೆ ಸಂಸ್ಥೆಗಳ ಸ್ಥಾಪನೆಯನ್ನು ಉತ್ತೇಜಿಸುವುದೇ ಮಹಾರಾಷ್ಟ ಸರಕಾರದ ಉದ್ದೇಶ ಎಂದು ರಾಜ್ಯದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ವಿನೋದ್ ತಾವ್ಡೆ ಹೇಳಿದ್ದಾರೆ.
ಜಿಯೋ ಇನ್ಸ್ಟಿಟ್ಯೂಟ್ ಗೆ ದೊರೆಯುವ ಸವಲತ್ತುಗಳ ಹೊರತಾಗಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಕೃಷಿ ಭೂಮಿ ಬಳಕೆಗೂ ಅನುಮತಿ ನೀಡಲು ಸರಕಾರ ನಿರ್ಧರಿಸಿದೆ.