ಗೋವಾಕ್ಕೆ ಶೀಘ್ರವೇ ಹಂಗಾಮಿ ಸಿಎಂ ನೇಮಕ ಸಾಧ್ಯತೆ
ಹೆಚ್ಚಿನ ಚಿಕಿತ್ಸೆಗೆ ಏಮ್ಸ್ಗೆ ದಾಖಲಾಗಲಿರುವ ಪಾರಿಕ್ಕರ್
ಪಣಜಿ, ಸೆ.15: ಕಳೆದ 7 ತಿಂಗಳುಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಹೆಚ್ಚಿನ ಚಿಕಿತ್ಸೆಗೆ ದಿಲ್ಲಿಯ ಏಮ್ಸ್ ಆಸ್ಪತ್ರೆ ದಾಖಲಾಗುತ್ತಿರುವ ಕಾರಣ ಗೋವಾಕ್ಕೆ ಶೀಘ್ರವೇ ಹಂಗಾಮಿ ಸಿಎಂ ನೇಮಕ ಮಾಡುವ ಸಾಧ್ಯತೆಯಿದೆ.
ತಾತ್ಕಾಲಿಕವಾಗಿ ಸಿಎಂ ಹುದ್ದೆಯನ್ನು ತ್ಯಜಿಸಲು ಪಾರಿಕ್ಕರ್ ಮುಂದಾಗಿದ್ದಾರೆ. ರಾಜಕೀಯ ಬೆಳವಣಿಗೆಯನ್ನು ಪರಿಶೀಲಿಸಲು ಕೇಂದ್ರ ಬಿಜೆಪಿ ನಾಯಕತ್ವವು ಪಕ್ಷದ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಹಾಗೂ ವೀಕ್ಷಕ ವಿಜಯ್ ಪುರಾಣಿಕ್ರನ್ನು ಶೀಘ್ರವೇ ಗೋವಾಕ್ಕೆ ಕಳುಹಿಸಿಕೊಡಲಿದೆ. ಪಾರಿಕ್ಕರ್ ಬದಲಿಗೆ ಪ್ರಭಾರಿ ಮುಖ್ಯಮಂತ್ರಿಯನ್ನು ನೇಮಿಸುವ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಾರಿಕ್ಕರ್ ಅನುಪಸ್ಥಿತಿಯಲ್ಲಿ ಸಂಪುಟದ ಹಿರಿಯ ಸಚಿವ ಹಾಗೂ ಮೈತ್ರಿಪಕ್ಷ ಮಹಾರಾಷ್ಟ್ರವಾಡಿ ಗೋಮಂತಕ್ ಪಾರ್ಟಿಯ ರಾಮಕೃಷ್ಣ ಸುದಿನ್ ಧಳ್ವೀಕರ್ ಹಂಗಾಮಿ ಮುಖ್ಯಮಂತ್ರಿಯಾಗಿ ನೇಮಕವಾಗುವ ಸಾಧ್ಯತೆಯಿದೆ.
ಸೆ.6 ರಂದು ಅಮೆರಿಕದಲ್ಲಿ ಮತ್ತೆ ಚಿಕಿತ್ಸೆ ಪಡೆದು ವಾಪಸಾದ ಬಳಿಕ ಮುಖ್ಯಮಂತ್ರಿ ಪಾರಿಕ್ಕರ್ ತನ್ನ ಕಚೇರಿಗೆ ತೆರಳಿಲ್ಲ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಆಗಾಗ ಕ್ಲಿನಿಕ್ಗೆ ತೆರಳುತ್ತಿದ್ದಾರೆ. ಗುರುವಾರ ರಾತ್ರಿ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡ ಕಾರಣ ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಮುಖ್ಯಮಂತ್ರಿ ಅನಾರೋಗ್ಯ ಪೀಡಿತರಾಗಿರುವ ಕಾರಣ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಹಾಗಾಗಿ ವಿಧಾನಸಭೆಯನ್ನು ಕೂಡಲೇ ವಿಸರ್ಜಿಸಬೇಕು ಹಾಗೂ ಹೊಸ ಜನಾದೇಶಕ್ಕೆ ಆದೇಶಿಸಬೇಕು ಅಥವಾ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಇತ್ತೀಚೆಗೆ ರಾಜ್ಯಪಾಲೆ ಮೃದುಲಾ ಸಿನ್ಹಾರನ್ನು ಭೇಟಿಯಾಗಿ ವಿನಂತಿಸಿದೆ.