ಬ್ಯಾಲೆಟ್ ಪೇಪರ್, ಬ್ಯಾಲೆಟ್ ಬಾಕ್ಸ್ ಕಿತ್ತುಕೊಂಡ ಎಬಿವಿಪಿ: ಆರೋಪ
ಜೆಎನ್ ಯು ಚುನಾವಣೆಯ ಮತಎಣಿಕೆ ಸ್ಥಗಿತ
ಹೊಸದಿಲ್ಲಿ, ಸೆ.15: ಮತ ಎಣಿಕೆಯ ಬಗ್ಗೆ ತಮಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ನಂತರ ಜವಹರಲಾಲ್ ನೆಹರೂ ವಿವಿಯ ವಿದ್ಯಾರ್ಥಿ ಯೂನಿಯನ್ ಚುನಾವಣೆಯ ಮತಎಣಿಕೆ ಸ್ಥಗಿತಗೊಂಡಿದೆ.
ಮತಎಣಿಕೆ ಪ್ರಕ್ರಿಯೆ ಆರಂಭವಾದ ಬಗ್ಗೆ ತಮಗೆ ಕೌಂಟಿಂಗ್ ಏಜೆಂಟ್ ಮಾಹಿತಿ ನೀಡಿಲ್ಲ ಎಂದು ಎಬಿವಿಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ಬಗ್ಗೆ ಹೇಳಿಕೆಯೊಂದನ್ನು ಜೆಎನ್ ಯು ಚುನಾವಣಾ ಸಮಿತಿ ನೀಡಿದ್ದು, ಆದರೆ ಪ್ರತಿಭಟನೆ ನಡೆಸಿದ ಪಕ್ಷದ ಹೆಸರನ್ನು ಉಲ್ಲೇಖಿಸಿಲ್ಲ. “ಬಲವಂತವಾಗಿ ಎಣಿಕೆ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ಬ್ಯಾಲೆಟ್ ಪೇಪರ್ ಗಳು ಮತ್ತು ಸೀಲ್ ಆದ ಬ್ಯಾಲಟ್ ಬಾಕ್ಸ್ ಗಳನ್ನು ಕಿತ್ತುಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಸೆಪ್ಟಂಬರ್ 14ರಂದು ರಾತ್ರಿ ಗಂಟೆಗೆ ಆರಂಭವಾದ ಮತ ಎಣಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ” ಎಂದು ಜೆಎನ್ ಯು ಹೇಳಿಕೆಯಲ್ಲಿ ತಿಳಿಸಿದೆ.
ಎಬಿವಿಪಿ ದಾಂಧಲೆ ನಡೆಸಿತು ಎಂದು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿದ್ದರೆ, ಎಬಿವಿಪಿ ಆರೋಪವನ್ನು ನಿರಾಕರಿಸಿದೆ.