ಪ್ರಧಾನಿ ಮೋದಿಯಿಂದ ವೋಟ್ ಬ್ಯಾಂಕ್ ರಾಜಕೀಯ: ಹಿಂದೂ ಮಹಾಸಭಾ
ಅಲಿಗಡ,ಸೆ.15: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಗೆ ಇತ್ತೀಚಿಗೆ ತಿದ್ದುಪಡಿಯನ್ನು ತರುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಅಖಿಲ ಭಾರತ ಹಿಂದು ಮಹಾಸಭಾ ಪ್ರಧಾನಿಗೆ ಪತ್ರವೊಂದನ್ನು ಬರೆದಿದ್ದು,ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಮತ್ತು ಇತರ 14 ಸದಸ್ಯರು ಈ ಪತ್ರಕ್ಕೆ ರಕ್ತದಲ್ಲಿ ಸಹಿಗಳನ್ನು ಹಾಕಿದ್ದಾರೆ.
ತಿದ್ದುಪಡಿಯನ್ನು ಹಿಂದೆಗೆದುಕೊಳ್ಳದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯನ್ನೂ ಒಡ್ಡಿರುವ ಪಾಂಡೆ,ದಯಾಮರಣಕ್ಕೊಳಗಾಗಲು ಪ್ರಧಾನಿಯವರ ಅನುಮತಿಯನ್ನು ಕೋರಿದ್ದಾರೆ.
ಹಿಂದೂ ಮಹಾಸಭಾ ಶರಿಯತ್ ನ್ಯಾಯಾಲಯಗಳ ಮಾದರಿಯಲ್ಲಿ ಸ್ಥಾಪನೆಗೊಂಡಿರುವ ಹಿಂದು ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನಾಗಿ ಪಾಂಡೆಯವರನ್ನು ಇತ್ತೀಚಿಗೆ ನೇಮಕಗೊಳಿಸಿತ್ತು.
ಮೋದಿ ಸರಕಾರವು ಮೇಲ್ಜಾತಿಗಳು ಮತ್ತು ಇತರ ಹಿಂದುಳಿದ ಜಾತಿಗಳ ಹಕ್ಕುಗಳನ್ನು ಅತಿಕ್ರಮಿಸುವ ಮೂಲಕ ಮತ ಬ್ಯಾಂಕ್ ರಾಜಕೀಯವನ್ನು ನಡೆಸುತ್ತಿದೆ ಎಂದು ಪಾಂಡೆ ಆರೋಪಿಸಿದ್ದಾರೆ.
ತಿದ್ದುಪಡಿಗಳು ಕಾಯ್ದೆಯ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ಮೇಲ್ಜಾತಿಗಳ ಜನರು ಆತಂಕಗೊಂಡಿದ್ದಾರೆ ಮತ್ತು ಇದು ಸ್ಫೋಟಕ ಸ್ಥಿತಿಗೆ ಕಾರಣವಾಗಲಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಮೇಲ್ಜಾತಿಗಳ ಸಂಘಟನೆಗಳು ತಿದ್ದುಪಡಿಯನ್ನು ವಿರೋಧಿಸಿ ಸೆ.10ರಂದು ಭಾರತ ಬಂದ್ಗೆ ಕರೆ ನೀಡಿದ್ದವು.