ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಜೆಡಿಯುಗೆ ಸೇರ್ಪಡೆ
ಹೊಸದಿಲ್ಲಿ, ಸೆ.16: 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆಲುವು ಸಾಧಿಸಿ ಪ್ರಧಾನಿಯಾಗುವಲ್ಲ್ಲಿ ಚುನಾವಣಾ ರಣನೀತಿ ರೂಪಿಸಿದ್ದ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ರವಿವಾರ ಪಾಟ್ನಾದಲ್ಲಿ ಸಂಯುಕ್ತ ಜನತಾದಳ(ಜೆಡಿಯು)ವನ್ನು ಸೇರ್ಪಡೆಯಾದರು. ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ಗೆ ಪ್ರಶಾಂತ್ ನೆರವಾಗಲಿದ್ದಾರೆ.
41ರ ಹರೆಯದ ಚುನಾವಣಾ ರಣತಂತ್ರಜ್ಞ ಕಿಶೋರ್ 2012ರಲ್ಲಿ ಗುಜರಾತ್ ಚುನಾವಣೆ ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರೊಂದಿಗೆ ಕೆಲಸ ಮಾಡಿದ್ದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೊಂದಿಗೆ ಭಿನ್ನಾಭಿಪ್ರಾಯ ತಲೆತೋರಿದಾಗ ಕಾಂಗ್ರೆಸ್ ಪಕ್ಷದ ತೆಕ್ಕೆ ಸೇರಿದ ಅವರು ಪಂಜಾಬ್ ಚುನಾವಣೆಯಲ್ಲಿ ರಣನೀತಿ ರೂಪಿಸಿದ್ದರು. ಪಂಜಾಬ್ನಲ್ಲಿ ಕಾಂಗ್ರೆಸ್ನ ಯಶಸ್ಸಿನಲ್ಲಿ ಕಿಶೋರ್ ಪಾತ್ರವಿತ್ತು ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಬಹಿರಂಗವಾಗಿ ಹೇಳಿಕೊಂಡಿದ್ದರು.
ಪ್ರಶಾಂತ್ ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಜಗನ್ಮೋಹನ್ ರೆಡ್ಡಿಯ ವೈಎಸ್ಆರ್ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದರು.