ಸೈಬೀರಿಯಾದಲ್ಲಿ ನೆಹರೂ ನೆನಪು ಮಾಡಿಕೊಂಡ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಬೆಲ್ಗಾರ್ಡ್ (ಸೈಬೀರಿಯಾ), ಸೆ.16: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸೈಬೀರಿಯಾ ಪಾರ್ಲಿಮೆಂಟ್ ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಮ್ಮ ಭಾಷಣದಲ್ಲಿ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ನೆನಪಿಸಿಕೊಂಡರು.
ಶುಕ್ರವಾರ ಸೈಬೀರಿಯಾಗೆ ಭೇಟಿ ನೀಡಿರುವ ನಾಯ್ಡು ಶನಿವಾರ ಅಲ್ಲಿನ ಪಾರ್ಲಿಮೆಂಟ್ನ ವಿಶೇಷ ಅಧಿವೇಶನದಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಭಾರತ ಹಾಗೂ ಸೈಬೀರಿಯಾದ ಸಂಬಂಧ ಆಳ ಇತಿಹಾಸವನ್ನು ಹೊಂದಿದೆ ಎಂದು ಬಣ್ಣಿಸಿದರು.
1961ರಲ್ಲಿ ಮೊಟ್ಟಮೊದಲ ಅಲಿಪ್ತ ರಾಷ್ಟ್ರಗಳ ಶೃಂಗಸಭೆ ಸೈಬೀರಿಯಾದಲ್ಲಿ ನಡೆದದ್ದನ್ನು ನೆನಪಿಸಿಕೊಂಡ ಅವರು, ಹಲವು ವಿಷಯಗಳಲ್ಲಿ ಭಾರತ ಹಾಗೂ ಸೈಬೀರಿಯಾ ಸಮಾನ ದೃಷ್ಟಿಕೋನ ಹೊಂದಿವೆ. ಇದು ಉಭಯ ದೇಶಗಳ ನಡುವಿನ ಗಾಢ ಸಂಬಂಧಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.
"1961ರಲ್ಲಿ ಮೊಟ್ಟಮೊದಲ ಅಲಿಪ್ತದೇಶಗಳ ಶೃಂಗಸಭೆ ಇಲ್ಲಿ ನಡೆದಿತ್ತು. ಭಾರತದ ಪ್ರಧಾನಿ ಪಂಡಿತ್ ನೆಹರೂ ಮತ್ತು ಇತರ ವಿಶ್ವ ಅಲಿಪ್ತ ಚಳವಳಿಯ ಮುಖಂಡರು ಈ ಸಭಾಂಗಣದಲ್ಲೇ ಮಾತನಾಡಿದ್ದರು" ಎಂದು ನೆನಪಿಸಿಕೊಂಡರು.
ನೆಹರೂ ಈ ಅಲಿಪ್ತ ಶೃಂಗದಲ್ಲಿ ಮಾಡಿದ ಭಾಷಣದ ತುಣುಕು ನೆನಪಿಸಿಕೊಳ್ಳುವುದು ಸೂಕ್ತ ಎಂದು ಉದಾಹರಿಸಿದ ಅವರು, "ಅವರು ನೀಡಿದ ಕರೆ ಇಂದಿಗೂ ಪ್ರಸ್ತುತ. ನಮ್ಮ ದೇಶ ಸಮಾಜದಲ್ಲಿ ಅದನ್ನು ಅಳವಡಿಸಿಕೊಂಡಾಗ ಮಾತ್ರ ಸ್ವಾತಂತ್ರ್ಯ ನಿಜವಾಗುತ್ತದೆ. ಸ್ವಾತಂತ್ರ್ಯ ಅಗತ್ಯ. ಏಕೆಂದರೆ ಅದು ನಮಗೆ ಬಲ ನೀಡುತ್ತದೆ ಮತ್ತು ಸಮೃದ್ಧ ಸಮಾಜವನ್ನು ರೂಪಿಸುತ್ತದೆ" ಎಂದು ವಿವರಿಸಿದರು. ಪ್ರಜಾಪ್ರಭುತ್ವ ರಾಜಕೀಯವನ್ನು ಬಲಗೊಳಿಸಲು ಪ್ರಯತ್ನಿಸಬೇಕು ಮತ್ತು ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಬೇಕು. ಪರಸ್ಪರ ಸಂವಾದ, ಸೇರ್ಪಡೆ ಮತ್ತು ಕಾನೂನಿನ ಆಡಳಿತ ನಮ್ಮ ಆಡಳಿತದ ವಿಧಾನವಾಗಬೇಕು ಎಂದು ಹೇಳಿದರು.