ಚೆನ್ನೈ, ತಿರುಪುರದಲ್ಲಿ ಪೆರಿಯಾರ್ ಪ್ರತಿಮೆ ಧ್ವಂಸ
139ನೇ ಜನ್ಮ ದಿನಾಚರಣೆಯಂದೇ ಕೃತ್ಯ - ಪ್ರತಿಮೆ ಮೇಲೆ ಚಪ್ಪಲಿ ಇರಿಸಿದ ದುಷ್ಕರ್ಮಿಗಳು
ಚೆನ್ನೈ, ಸೆ. 17: ದ್ರಾವಿಡ ಚಳವಳಿಯ ನಾಯಕ ಹಾಗೂ ವಿಚಾರವಾದಿ ಇ.ವಿ. ರಾಮಸ್ವಾಮಿ ಪೆರಿಯಾರ್ ಅವರ 139ನೇ ಜನ್ಮದಿನಾಚರಣೆಯಾದ ಸೋಮವಾರ ದುಷ್ಕರ್ಮಿಗಳು ಅವರ ಪ್ರತಿಮೆ ಭಗ್ನಗೊಳಿಸಿರುವ ಹಾಗೂ ತಲೆ ಮೇಲೆ ಚಪ್ಪಲಿ ಇರಿಸಿ ವಿಕೃತಿ ಮೆರೆದ ಘಟನೆ ಚೆನ್ನೈ ಹಾಗೂ ತಿರುಪುರದಲ್ಲಿ ನಡೆದಿದೆ. ಚೆನ್ನೈ ನಗರದ ಅಣ್ಣಾ ಸಾಲೈಯಲ್ಲಿರುವ ಸಿಂಪ್ಸನ್ ಜಂಕ್ಷನ್ ಸಮೀಪ ಇರುವ ಪ್ರತಿಮೆಗೆ ಮಾಲಾರ್ಪಣೆ ಗೈಯಲು ವಿಸಿಕೆ ನಾಯಕ ತೋಲ್ ತಿರುಮಾವಲವನ್ ಆಗಮಿಸಿದ್ದರು. ಈ ಸಂದರ್ಭ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ವಕೀಲ ಜಗದೀಶನ್ ಎಂಬಾತ ಪೆರಿಯಾರ್ ಅವರ ಪ್ರತಿಮೆಯತ್ತ ಶೂ ಎಸೆದರು ಹಾಗೂ ಘೋಷಣೆಗಳನ್ನು ಕೂಗಿದರು. ವಿಸಿಕೆ ಬೆಂಬಲಿಗರು ಕೂಡಲೇ ವಕೀಲರನ್ನು ಸೆರೆ ಹಿಡಿದರು ಹಾಗೂ ವಿಚಾರಣೆಗೆ ಚೆನ್ನೈ ಪೊಲೀಸರಿಗೆ ಹಸ್ತಾಂತರಿಸಿದರು.
ತಿರುಪುರದಲ್ಲಿ ಕೂಡ ಪೆರಿಯಾರ್ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಅಲ್ಲದೆ ಪ್ರತಿಮೆಯ ಮೇಲೆ ಚಪ್ಪಲಿಯನ್ನು ಇರಿಸಿದ್ದಾರೆ. ಆದರೆ, ಸಕಾಲದಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ಚಪ್ಪಲಿಯನ್ನು ತೆರವುಗೊಳಿಸಿದರು.
ಘಟನೆಗಳನ್ನು ಖಂಡಿಸಿ ತಿರುಮಾನವಲವನ್ ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಇದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದೆ ತೆಗೆದುಕೊಳ್ಳಲಾಯಿತು.
ಎಐಎಡಿಎಂಕೆ ಹಾಗೂ ಪ್ರತಿಪಕ್ಷ ಡಿಎಂಕೆ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಘಟನೆಯನ್ನು ಖಂಡಿಸಿದ್ದಾರೆ ಹಾಗೂ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.