ಅಗ್ನಿವೇಶ್ಗೆ ಹಲ್ಲೆ ಪ್ರಕರಣ ಸಿಬಿಐ ತನಿಖೆಗೆ ಹೈಕೋರ್ಟ್ ಸಂಪರ್ಕಿಸಿ: ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಸೆ. 17: ದಿಲ್ಲಿ ಹಾಗೂ ಜಾರ್ಖಂಡ್ನಲ್ಲಿ ನಡೆದ ದಾಳಿ ತನಿಖೆಯನ್ನು ಸಿಬಿಐ ಅಥವಾ ಎನ್ಐಎ ನಡೆಸಲು ಉಚ್ಚ ನ್ಯಾಯಾಲಯ ಸಂಪರ್ಕಿಸುವಂತೆ ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಅವರಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ. ಭದ್ರತೆ ನೀಡಲು ಕೇಂದ್ರ ಸರಕಾರದ ಸಂಬಂಧಿತ ಪ್ರಾಧಿಕಾರವನ್ನು ಸಂಪರ್ಕಿಸುವಂತೆ ಕೂಡ ಅಗ್ನಿವೇಶ್ ಅವರಿಗೆ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಹಾಗೂ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಅವರನ್ನು ಒಳಗೊಂಡ ಪೀಠ ತಿಳಿಸಿದೆ.
ತನ್ನ ಕಕ್ಷಿದಾರನ ಮೇಲಿನ ಬೆದರಿಕೆ ತಡೆಯುವಂತೆ ಅಗ್ನಿವೇಶ್ ಪರ ವಕೀಲ ಮೆಹಮೂದ್ ಪ್ರಾಚಾ ಕೋರಿಕೆಗೆ ಪ್ರತಿಕ್ರಿಯಿಸಿದ ಪೀಠ, ‘‘ಬೆದರಿಕೆ ನಮಗೆ ತಡೆಯಲು ಸಾಧ್ಯವಿಲ್ಲ. ನಿಮ್ಮ ಮೇಲಿನ ಬೆದರಿಕೆಯನ್ನು ನಾವು ಹೇಗೆ ತಡೆಯಲು ಸಾಧ್ಯ? ಜನರು ನಮಗೆ ಕೂಡ ಬೆದರಿಕೆ ಒಡ್ಡುತ್ತಿದ್ದಾರೆ.’’ ಎಂದಿದೆ. ಅಗ್ನಿವೇಶ್ ಅವರ ಮೇಲೆ ಎರಡು ಬಾರಿ ದಾಳಿ ನಡೆದಿದೆ. ಒಂದು ಬಾರಿ ಜಾರ್ಖಂಡ್ನಲ್ಲಿ, ಇನ್ನೊಂದು ಬಾರಿ ದಿಲ್ಲಿಯಲ್ಲಿ. ಅವರ ಸುರಕ್ಷಿತತೆ ಮುಖ್ಯ ಎಂದು ಪ್ರಾಚಾ ಹೇಳಿದರು. ಎರಡೂ ಪ್ರಥಮ ಮಾಹಿತಿ ವರದಿಗಳನ್ನು ಸಂಯೋಜಿಸುವಂತೆ ಹಾಗೂ ತನಿಖೆಯನ್ನು ಸಿಬಿಐ ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸುವಂತೆ ಅವರು ಆಗ್ರಹಿಸಿದರು. ಪೊಲೀಸರು ಪಾರದರ್ಶಕವಾಗಿ ತನಿಖೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಅಗ್ನಿವೇಶ್ ಅವರಿಗೆ ಭರವಸೆ ಇಲ್ಲ. ಆದುದರಿಂದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಅವರು ಹೇಳಿದರು.