ಲೋಕಸಭಾ ಚುನಾವಣೆ: ವ್ಯಕ್ತಿಯ ಸಜೀವದಹನ ಪ್ರಕರಣದ ಆರೋಪಿ ಶಂಭುಲಾಲ್ ಆಗ್ರಾದಿಂದ ಸ್ಪರ್ಧೆ?
ಹೊಸದಿಲ್ಲಿ, ಸೆ.18: ಕಳೆದ ವರ್ಷ ರಾಜಸ್ಥಾನದ ರಾಜಸಮಂಡ್ ಎಂಬಲ್ಲಿ ಮುಹಮ್ಮದ್ ಅಫ್ರಾಝುಲ್ ಎಂಬವರ ಮೇಲೆ ಲವ್ ಜಿಹಾದ್ ಆರೋಪ ಹೊರಿಸಿ ನಡು ರಸ್ತೆಯಲ್ಲಿಯೇ ಹೊಡೆದು ಬೆಂಕಿ ಹಚ್ಚಿ ಸಾಯಿಸಿದ ಪ್ರಕರಣದ ಆರೋಪಿ ಶಂಭುಲಾಲ್ ರೇಗರ್ ನನ್ನು ಉತ್ತರ ಪ್ರದೇಶ ನವನಿರ್ಮಾಣ್ ಸೇನಾ ಮುಂದಿನ ಲೋಕಸಭಾ ಚುನಾವಣೆಗೆ ಆಗ್ರಾದಲ್ಲಿ ತನ್ನ ಅಭ್ಯರ್ಥಿಯನ್ನಾಗಿಸುವ ಸಾಧ್ಯತೆಯಿದೆ. ಆತನಿಗೆ ಈಗಾಗಲೇ ಪಕ್ಷ ಟಿಕೆಟ್ ಆಫರ್ ಮಾಡಿದ್ದು, ಆತ ಈ ಆಫರ್ ಒಪ್ಪಿಕೊಂಡಿದ್ದಾನೆಂದು ಹೇಳಲಾಗಿದೆ.
ಜೋಧಪುರ್ ಜೈಲಿನಲ್ಲಿದ್ದುಕೊಂಡೇ ಆತ ಚುನಾವಣೆ ಸ್ಪರ್ಧಿಸುತ್ತಾನೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಜನಿ ಹೇಳಿದ್ದಾರೆ. ತಮ್ಮ ಪಕ್ಷಕ್ಕೊಬ್ಬ ಹಿಂದುತ್ವ ಅಭ್ಯರ್ಥಿ ಅಗತ್ಯವಿರುವುದರಿಂದ ರೇಗರ್ ಗಿಂತ ಉತ್ತಮ ಅಭ್ಯರ್ಥಿ ದೊರೆಯಲು ಸಾಧ್ಯವಿಲ್ಲ, ರೇಗರ್ ಚುನಾವಣೆ ಸ್ಪರ್ಧಿಸುತ್ತಿರುವ ಕುರಿತಂತೆ ಔಪಚಾರಿಕ ಘೋಷಣೆ ಸದ್ಯದಲ್ಲಿಯೇ ನಡೆಯಲಿದೆ ಎಂದ ಜನಿ, ಮುಖ್ತಾರ್ ಅನ್ಸಾರಿ ಹಾಗೂ ರಾಜಾ ಭಯ್ಯಾ ವಿರುದ್ಧ ರೇಗರ್ ಗಿಂತಲೂ ಗಂಭೀರ ಪ್ರಕರಣಗಳಿವೆ ಎಂದು ಹೇಳಿದರಲ್ಲದೆ ಆತ ನಿರಪರಾಧಿ ಎಂದು ವಾದಿಸಿದರು.
ಲವ್ ಜಿಹಾದ್ ವಿರುದ್ಧ ರೇಗರ್ ನಡೆಸಿದ ಹೋರಾಟವನ್ನು ಗೌರವಿಸಿ ಜೋಧಪುರದಲ್ಲಿ ರಾಮನವಮಿ ಸಂದರ್ಭ ಆತನ ಕುರಿತಂತೆ ಟ್ಯಾಬ್ಲೋವೊಂದನ್ನೂ ಸಿದ್ಧಪಡಿಸಲಾಗಿತ್ತು.