ನಿರ್ಮಲಾ ಸೀತಾರಾಮನ್ ಗೆ ಗುಂಡಿಕ್ಕುವುದಾಗಿ ವಾಟ್ಸ್ ಆ್ಯಪ್ ಚಾಟ್: ಇಬ್ಬರ ಬಂಧನ
ಪಿತ್ತೋರಘರ್, ಸೆ.18: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕೊಲ್ಲುವ ಬಗ್ಗೆ ವಾಟ್ಸ್ ಆ್ಯಪ್ ಚಾಟ್ ಮಾಡಿದ ಇಬ್ಬರನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಆರೋಪಿಗಳು ಈ ರೀತಿ ಚಾಟ್ ಮಾಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಣಾ ಸಚಿವೆ ಸೋಮವಾರ ಉತ್ತರಾಖಂಡದ ಧರ್ಚುಲ ಪಟ್ಟಣಕ್ಕೆ ಭೇಟಿ ನೀಡುವ ಮೊದಲೇ ಇಬ್ಬರನ್ನೂ ಬಂಧಿಸಿ ಐಪಿಸಿ ಸೆಕ್ಷನ್ 306 ಹಾಗೂ ಐಟಿ ಕಾಯಿದೆಯ ಸೆಕ್ಷನ್ 66 ಅನ್ವಯ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಸೇನೆ ಆಯೋಜಿಸಿದ್ದ ಬೃಹತ್ ವೈದ್ಯಕೀಯ ಶಿಬಿರ ಉದ್ಘಾಟನೆಗೆ ಸಚಿವೆ ಆಗಮಿಸಿದ್ದರು.
“ನಾನು ಸೀತಾರಾಮನ್ ಅವರಿಗೆ ಗುಂಡಿಕ್ಕುತ್ತೇನೆ, ನಾಳೆ ಆಕೆಯ ಕೊನೆಯ ದಿನ” ಎಂದು ಆರೋಪಿಗಳಲ್ಲೊಬ್ಬ ಸಂದೇಶ ಕಳುಹಿಸಿದ್ದ. ಆರೋಪಿಗಳಿಗೆ ಯಾವುದಾದರೂ ಕ್ರಿಮಿನಲ್ ಹಿನ್ನೆಲೆಯಿದೆಯೇ ಅಥವಾ ಅವರ ಬಳಿ ಶಸ್ತ್ರಾಸ್ತ್ರಗಳಿವೆಯೇ ಎಂದು ಪೊಲೀಸರು ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಅವರು ಈ ಸಂದೇಶ ಕಳುಹಿಸಿದ ವಾಟ್ಸ್ಯಾಪ್ ಗ್ರೂಪಿನ ಅಡ್ಮಿನ್ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.