ದೇಶದ ರಸ್ತೆ ಯೋಜನೆಗಳಿಗೆ ಸಾಲ ನೀಡಲು ಬ್ಯಾಂಕುಗಳು ಹಿಂಜರಿಯುತ್ತಿವೆ ಎಂದ ಕೇಂದ್ರ ಸಚಿವ ಗಡ್ಕರಿ
ಹೊಸದಿಲ್ಲಿ, ಸೆ. 19: ರಸ್ತೆ ಗುತ್ತಿಗೆದಾರರಿಗೆ ಸಾಲ ಹಾಗೂ ಬ್ಯಾಂಕ್ ಗ್ಯಾರಂಟಿ ಒದಗಿಸಲು ಬ್ಯಾಂಕ್ ಗಳು ಹಿಂಜರಿಯುತ್ತಿರುವುದರಿಂದ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ 2022ರೊಳಗಾಗಿ 84,000 ಕಿಮೀ ರಸ್ತೆ ನಿರ್ಮಾಣ ಯೋಜನೆ ನೆನೆಗುದಿಗೆ ಬೀಳುವ ಭಯವಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮಂಗಳವಾರ ಬ್ಲೂಂಬರ್ಗ್ ಇಂಡಿಯಾ ಇಕನಾಮಿಕ್ ಫೋರಂ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ದೇಶದ ಕೈಗಾರಿಕೆಗಳಿಗಾಗಿ, ಹೂಡಿಕೆ ಕ್ಷೇತ್ರಕ್ಕಾಗಿ, ಗುತ್ತಿಗೆದಾರರಿಗಾಗಿ ಹಾಗೂ ಉದ್ಯೊಗ ಸೃಷ್ಟಿಗಾಗಿ ಬ್ಯಾಂಕುಗಳ ಸಹಕಾರ ಅಗತ್ಯ. ಅವರು ಬೆಂಬಲ ನೀಡುತ್ತಿದ್ದರೂ ಪ್ರಕ್ರಿಯೆ ನಿಧಾನವಾಗಿದೆ ಎಂದು ಗಡ್ಕರಿ ತಿಳಿಸಿದರು.
ಭಾರತದ ಬ್ಯಾಂಕುಗಳ ಹೆಚ್ಚುತ್ತಿರುವ ಅನುತ್ಪಾದಕ ಸಾಲಗಳ ಪ್ರಮಾಣದಿಂದ ಬ್ಯಾಂಕುಗಳು ದೊಡ್ಡ ಮೊತ್ತದ ಸಾಲ ನೀಡಲು ಹಿಂಜರಿಯುತ್ತಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಳೆದ ತಿಂಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 250 ಬಿಲಿಯನ್ ಸಾಲ ಪಡೆದಿದ್ದರೂ ರಸ್ತೆ ಅಭಿವೃದ್ಧಿಗೆ ಸಾಲ ನೀಡುವುದು ಸುರಕ್ಷಿತ ಎಂದು ಇತರ ಬ್ಯಾಂಕುಗಳಿಗೆ ಮನವರಿಕೆ ಮಾಡುವ ಅಗತ್ಯವಿದೆ ಎಂದು ಗಡ್ಕರಿ ಹೇಳಿದರು.
ಸರಕಾರವು ವಿದ್ಯುತ್ ಚಾಲಿತ ವಾಹನಗಳು ಹಾಗೂ ಆಟೊಮೊಬೈಲ್ ಗಳಿಗೆ ಹಾಗೂ ಪರ್ಯಾಯ ಇಂಧನ ಉಪಯೋಗಿಸುವ ವಾಹನಗಳಿಗೆ ಪರ್ಮಿಟ್ ಅಗತ್ಯತೆಗಳನ್ನು ತೆಗೆದು ಹಾಕಿದೆ ಎಂದೂ ಗಡ್ಕರಿ ತಿಳಿಸಿದರು.