ಕಲ್ಪನೆಯ ಆಧಾರದಲ್ಲಿ ಸ್ವಾತಂತ್ರ್ಯ ಮೊಟಕುಗೊಳಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ಹೋರಾಟಗಾರರ ಬಂಧನ ಪ್ರಕರಣ
ಹೊಸದಿಲ್ಲಿ, ಸೆ. 19: ಕಲ್ಪನೆಗಳ ಆಧಾರದಲ್ಲಿ ವ್ಯಕ್ತಿಗಳ ಸ್ವಾತಂತ್ರ್ಯ ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಐವರು ಸಾಮಾಜಿಕ ಹೋರಾಟಗಾರರ ಬಂಧನಕ್ಕೆ ಸಂಬಂಧಿಸಿ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಭಿನ್ನಾಭಿಪ್ರಾಯ ಹಾಗೂ ಕಾನೂನು, ಸುವ್ಯವಸ್ಥೆ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿತು. ಕಲ್ಪನೆಯ ಬಲಿಪೀಠದ ಮೇಲೆ ನಾವು ಸ್ವಾತಂತ್ರ್ಯವನ್ನು ಬಲಿ ನೀಡಲು ಸಾಧ್ಯವಿಲ್ಲ. ಈ ಎಲ್ಲ ಪ್ರಯತ್ನಗಳನ್ನು ನಾವು ಹದ್ದಿನ ಕಣ್ಣಿನಿಂದ ನೋಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಒಳಗೊಂಡಿರುವ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರು ಹೇಳಿದ್ದಾರೆ.
ವ್ಯವಸ್ಥೆ ಅಥವಾ ಈ ನ್ಯಾಯಾಲಯದ ವಿರೋಧ ಬಂದಾಗ ನಮ್ಮ ಸಂಸ್ಥೆಗಳು ಸಾಕಷ್ಟು ಬಲಿಷ್ಠವಾಗಿ ನಿಲ್ಲಬೇಕು. ಸಂಬಂಧಿತ ಚುನಾಯಿತ ಸರಕಾರ ಕಾನೂನು ಸುವ್ಯವಸ್ಥೆ ಬುಡಮೇಲೆ ಆದಾಗ ಪುನಾರಚಿಸಲು ಕೆಲವು ವಿಶೇಷ ವ್ಯವಸ್ಥೆ ಬೇಕು ಎಂದು ನ್ಯಾಯಮೂರ್ತಿ ಚಂದ್ರಚೂಡ ಹೇಳಿದ್ದಾರೆ.