ದಲಿತ ಯುವಕನನ್ನು ವಿವಾಹವಾದ ಪುತ್ರಿಯ ಕೈ ಕತ್ತರಿಸಿದ ತಂದೆ
ಹೈದರಾಬಾದ್, ಸೆ.20: ದಲಿತ ಯುವಕನ್ನು ವಿವಾಹವಾದ ಕಾರಣಕ್ಕೆ ತಂದೆಯೇ ಮಗಳ ಕೈ ಕತ್ತರಿಸಿದ ಹೃದಯ ವಿದ್ರಾವಕ ಘಟನೆ ನಗರದ ಹೃದಯ ಭಾಗದಲ್ಲಿ ನಡೆದಿದೆ. ಹೊಸದಾಗಿ ವಿವಾಹವಾದ ದಲಿತ ಯುವಕನ ಮೇಲೂ ಹಲ್ಲೆ ಮಾಡಲಾಗಿದೆ. ಮಗಳ ದವಡೆಯನ್ನೂ ಭಾಗಶಃ ಕತ್ತರಿಸಲಾಗಿದೆ.
ನಲ್ಗೊಂಡಾದಲ್ಲಿ ದಲಿತ ಯುವಕನೊಬ್ಬನನ್ನು ಗರ್ಭಿಣಿ ಪತ್ನಿಯ ಎದುರೇ ನಿರ್ದಯವಾಗಿ ಹತ್ಯೆ ಮಾಡಿದ ಘಟನೆಯ ಬೆನ್ನಲ್ಲೇ ಮತ್ತೊಂದು ಇಂಥ ಭೀಬತ್ಸ ಪ್ರಕರಣ ಬೆಳಕಿಗೆ ಬಂದಿದೆ.
ಇತರ ಹಿಂದುಳಿದ ವರ್ಗಕ್ಕೆ ಸೇರಿದ ಯುವತಿ ದಲಿತ ಯುವಕನನ್ನು ವಿವಾಹವಾದ್ದರಿಂದ ರೊಚ್ಚಿಗೆದ್ದ ತಂದೆ ಮೊದಲು ಯುವಕ ಬಿ.ಸಂದೀಪ್ (22) ಎಂಬಾತನ ಮೇಲೆ ಹಲ್ಲೆ ಮಾಡಿದರು. ಸಂದೀಪ್ ಹಾಗೂ ಮಾಧವಿ ಚಾರಿ ಐದು ವರ್ಷಗಳಿಂದ ಪ್ರೇಮಸಂಬಂಧ ಹೊಂದಿದ್ದು, ತಂದೆ ಮನೋಹರ್ ಚಾರಿ (42)ಯ ತೀವ್ರ ವಿರೋಧದ ನಡುವೆಯೂ ಸೆಪ್ಟೆಂಬರ್ 12ರಂದು ರಹಸ್ಯವಾಗಿ ವಿವಾಹವಾಗಿದ್ದರು. ಬುಧವಾರ ಮಧ್ಯಾಹ್ನ ಮಗಳಿಗೆ ದೂರವಾಣಿ ಕರೆ ಮಾಡಿ ಅಳಿಯನೊಂದಿಗೆ ಬರುವಂತೆ ತಂದೆ ಆಹ್ವಾನಿಸಿದ್ದ.
ಎರ್ರಗಡ್ಡ ಪ್ರದೇಶದ ಗೋಕುಲ್ ಥಿಯೇಟರ್ ಬಳಿಗೆ ಸಂಜೆ 3:30ರ ವೇಳೆಗೆ ಬಂದಾಗ, ಮಾಧವಿಯ ತಂದೆ ಚೀಲದಿಂದ ಹರಿತವಾದ ಆಯುಧ ತೆಗೆದು ಮೊದಲು ಸಂದೀಪ್ ಮೇಲೆ ಹಲ್ಲೆಗೆ ಮುಂದಾದ. ತಕ್ಷಣ ಸಂದೀಪ್ ತಪ್ಪಿಸಿಕೊಂಡು ಹೋಗಿರುವುದು ಪೊಲೀಸ್ ಸಿಸಿಟಿವಿ ದೃಶ್ಯಾವಳಿಯಿಂದ ಕಂಡುಬರುತ್ತದೆ. ಆಗ ಮಗಳತ್ತ ಕತ್ತಿ ಬೀಸಿದ ತಂದೆ ಆಕೆಯ ಕೈ ಕತ್ತರಿಸಿದ. ಬಳಿಕ ಮುಖವನ್ನೂ ಗಾಯಗೊಳಿಸಿದ. ಮಾಧವಿ ನೆಲದ ಮೇಲೆ ಬಿದ್ದಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣುತ್ತದೆ. ಮತ್ತೆ ಮಗಳ ಮೇಲೆ ಕತ್ತಿ ಬೀಸಿದಾಗ ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ಮನೋಹರ್ನನ್ನು ಒದ್ದ. ತಕ್ಷಣ ಮನೋಹರ್ ಸ್ಥಳದಿಂದ ಪರಾರಿಯಾದ. ಮನೋಹರ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಮಾಧವಿಯ ಮುಖದಿಂದ ಕುತ್ತಿಗೆಯುದ್ದಕ್ಕೂ 12 ಇಂಚು ಗಾಯವಾಗಿದೆ. ಎಡಗೈ ಚರ್ಮದಲ್ಲಿ ನೇತಾಡುತ್ತಿತ್ತು. ಕೈ ಮರುಜೋಡಿಸುವ ಶಸ್ತ್ರಚಿಕಿತ್ಸೆ ಪ್ರಗತಿಯಲ್ಲಿದೆ. ಸಂದೀಪ್ನ ಬಾಯಿಯ ಬಳಿಯೂ ಗಾಯವಾಗಿದ್ದು, 10 ಹೊಲಿಗೆ ಹಾಕಲಾಗಿದೆ.