ನಮ್ಮನ್ನು ಬೇಡುವಂತೆ ಮಾಡಬೇಡಿ: ಹುತಾತ್ಮ ಬಿಎಸ್ ಎಫ್ ಯೋಧನ ಪುತ್ರನಿಂದ ಸರಕಾರಕ್ಕೆ ಮನವಿ
“ರಾಜನಾಥ್ ಸಿಂಗ್ ಅವರೇ ಹತ್ಯೆಯನ್ನಾದರೂ ಖಂಡಿಸಿ”
ಫೊಟೊಕೃಪೆ: aninews.in
ಹೊಸದಿಲ್ಲಿ, ಸೆ.20: ನನ್ನ ತಂದೆಯ ಹತ್ಯೆಯನ್ನು ಖಂಡಿಸಿ ರಾಜ್ ನಾಥ್ ಸಿಂಗ್ ಹೇಳಿಕೆಯೊಂದನ್ನು ನಾನು ಕೇಳಿಕೊಳ್ಳುತ್ತೇನೆ. ನಮಗೆ ಪರಿಹಾರ ಸಿಗಲಿದೆ ಎಂದು ಅವರು ಭರವಸೆ ನೀಡಲಿ. ನಮಗೆ ಸಹಾಯ ಮಾಡಿ. ನಾವು ಬೇಡುವಂತೆ ಮಾಡಬೇಡಿ ಎಂದು ಪಾಕ್ ಸೇನೆಯಿಂದ ಬರ್ಬರವಾಗಿ ಹತ್ಯೆಗೊಳಗಾದ ಬಿಎಸ್ ಎಫ್ ಯೋಧ ನರೇಂದರ್ ಸಿಂಗ್ ರ ಪುತ್ರ ಮನವಿ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮೋಹಿತ್ ಕುಮಾರ್, ದೇಶಕ್ಕಾಗಿ ನನ್ನ ತಂದೆ ಪ್ರಾಣತ್ಯಾಗ ಮಾಡಿರುವುದು ಹೆಮ್ಮೆ ಎನಿಸುತ್ತಿದೆ. ಇದು ನಮಗೆ ಹೆಮ್ಮೆಯ ಕ್ಷಣ ಎಂದು ಹೇಳಿದರು.
“ನಾವೀಗ ಹೆಮ್ಮೆ ಪಡುತ್ತಿದ್ದೇವೆ. ಆದರೆ ಮೂರು ನಾಲ್ಕು ದಿನಗಳ ನಂತರ ನಮಗೆ ಏನೂ ಸಹಾಯ ಸಿಗದಿದ್ದಾಗ ಏನು ನಡೆಯಲಿದೆ?, ನನ್ನ ಕುಟುಂಬವನ್ನು ಘನತೆಯೊಂದಿಗೆ ನಡೆಸಿಕೊಳ್ಳಬೇಕು ಎಂದು ನಾನು ಬಯಸುತ್ತೇನೆ. ನಮ್ಮ ಕುಟುಂಬದಲ್ಲಿ ತಂದೆಯೊಬ್ಬರೇ ದುಡಿಯುತ್ತಿದ್ದವರು. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾಗ ಅವರು ಮೃತಪಟ್ಟರು. ನಮಗೆ ಬೇಕಾದ ಸಹಾಯವನ್ನು ಅಧಿಕಾರಿಗಳು ಮಾಡಬೇಕು ಎಂದು ನಾನು ಬಯಸುತ್ತೇವೆ. ನಮ್ಮನ್ನು ಬೇಡುವಂತೆ ಮಾಡಬೇಡಿ ಎಂದು ಮೋಹಿತ್ ಕುಮಾರ್ ಹೇಳಿದ್ದಾರೆ.