ದೇಶದ ಚೌಕಿದಾರ್ ಕಳ್ಳ: ರಫೇಲ್ ಕುರಿತು ಮೋದಿ ವಿರುದ್ಧ ಮತ್ತೆ ರಾಹುಲ್ ವಾಗ್ದಾಳಿ
ಡುಂಗರಪುರ(ರಾಜಸ್ಥಾನ),ಸೆ.20: ಗುರುವಾರ ಬುಡಕಟ್ಟು ಪ್ರಾಬಲ್ಯದ ಸಗ್ವಾರಾದಲ್ಲಿ ಬಹಿರಂಗ ಸಭೆಯೊಂದರಲ್ಲಿ ರಫೇಲ್ ಒಪ್ಪಂದ ಕುರಿತು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು,’ದೇಶದ ಕಾವಲುಗಾರ ಓರ್ವ ಕಳ್ಳ’ ಎಂದು ಈಗ ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ರಾಹುಲ್ ಟೀಕೆಯನ್ನು ಬಿಜೆಪಿ ಖಂಡಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು,ಕಾಂಗ್ರೆಸ್ ಅಧ್ಯಕ್ಷರಿಗೆ ಪ್ರಧಾನಿ ಹುದ್ದೆಯ ಬಗ್ಗೆ ಗೌರವವಿಲ್ಲ ಎನ್ನುವುದನ್ನು ಇದು ತೋರಿಸುತ್ತಿದೆ ಎಂದರು.
ರಾಹುಲ್ ಅವರು ರಫೇಲ್ ಒಪ್ಪಂದದ ಕುರಿತು ಮೋದಿಯವರ ಮೌನ ಮತ್ತು ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡುವಲ್ಲಿ ಮೋದಿ ಸರಕಾರದ ವೈಫಲ್ಯವನ್ನು ಪ್ರಸ್ತಾಪಿಸಿ ಮಾತನಾಡುತ್ತಿದ್ದರು.
ತಾನು ದೇಶದ ಪ್ರಧಾನಿಯಾಗಲು ಬಯಸಿಲ್ಲ,ಅದರ ಕಾವಲುಗಾರನಾಗಲು ಬಯಸಿದ್ದೇನೆ ಎಂದು ಮೋದಿಯವರು ಹೇಳಿದ್ದರು. ದೇಶದ ಕಾವಲುಗಾರ ಕಳ್ಳನಾಗಿದ್ದಾನೆ ಎಂಬ ಮಾತು ಈಗ ಬೀದಿಬೀದಿಗಳಲ್ಲಿ ಕೇಳಿಬರುತ್ತಿದೆ ಎಂದು ರಾಹುಲ್ ನುಡಿದರು.