ಕಲ್ಲುಹೃದಯವನ್ನೂ ಕರಗಿಸುವ ಈ ಫೋಟೊ ಎರಡೇ ದಿನಗಳಲ್ಲಿ 50 ಲ.ರೂ.ನೆರವು ನಿಧಿಯನ್ನು ಸಂಗ್ರಹಿಸಿದೆ!
ತನ್ನ ತಂದೆಯ ಶವದ ಬಳಿ ನಿಂತುಕೊಂಡು ರೋದಿಸುತ್ತಿರುವ ಎಳೆಯ ಬಾಲಕನ ಚಿತ್ರ ಸಾವಿರಾರು ಜನರು ಕಂಬನಿಗಳನ್ನು ಮಿಡಿಯುವಂತೆ ಮಾಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಆದ ಕೇವಲ ಎರಡೇ ದಿನಗಳಲ್ಲಿ ಈ ಚಿತ್ರ 50 ಲ.ರೂ.ಗಳಷ್ಟು ಬೃಹತ್ ಮೊತ್ತವನ್ನು ಸಂಗ್ರಹಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಚಿತ್ರ ವೈರಲ್ ಆಗಿದ್ದು,ಬಾಲಕ ತನ್ನ ಮೃತ ತಂದೆಯ ಕೆನ್ನೆಯನ್ನು ಸವರುತ್ತಿರುವ ಈ ಚಿತ್ರ ನೆಟಿಜನ್ಗಳ ಹೃದಯಗಳನ್ನು ತಟ್ಟಿದೆ.
ಅನಿಲ್(37) ದಿಲ್ಲಿಯ ನಿವಾಸಿಯಾಗಿದ್ದು,ಒಳಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ. ಕಳೆದ ಶುಕ್ರವಾರ ದಿಲ್ಲಿ ಜಲ ಮಂಡಳಿಗೆ ಸೇರಿದ ಆರು ಅಡಿ ಆಳದ ಒಳಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಸೊಂಟಕ್ಕೆ ಕಟ್ಟಿಕೊಂಡಿದ್ದ ಹಗ್ಗ ತುಂಡಾಗಿ ಕೊಳಚೆಯಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿದ್ದ.
ಮೂವರು ಮಕ್ಕಳ ತಂದೆಯಾಗಿದ್ದ ಅನಿಲ್ ಕೇವಲ ಸಾಯುವ ಕೇವಲ ಒಂದು ವಾರ ಮೊದಲಷ್ಟೇ ನ್ಯುಮೋನಿಯಾದಿಂದಾಗಿ ತನ್ನ ನಾಲ್ಕು ತಿಂಗಳ ಮಗುವನ್ನು ಕಳೆದುಕೊಂಡಿದ್ದ. ಮಗುವನ್ನು ಕಳೆದುಕೊಂಡ ದುಃಖದಲ್ಲಿದ್ದರೂ ಮನೆಯಲ್ಲಿನ ತುತ್ತಿನ ಚೀಲಗಳನ್ನು ತುಂಬಿಸುವ ಅನಿವಾರ್ಯತೆಯಿಂದ ಕೆಲಸಕ್ಕೆ ಹಾಜರಾಗಿದ್ದ.
ಅನಿಲ್ ಸತ್ತಾಗ ಆತನ ಕಡುಬಡುತನದ ಕುಟುಂಬಕ್ಕಾಗಿ ಶೋಕಿಸುವವರೂ ಇರಲಿಲ್ಲ. ಅತ್ಯಂತ ದುಃಖದ ವಿಷಯವೆಂದರೆ ಮನೆಯ ಯಜಮಾನನ ಅಂತ್ಯಸಂಸ್ಕಾರವನ್ನು ನಡೆಸಲೂ ಕುಟುಂಬದ ಬಳಿ ದುಡ್ಡಿರಲಿಲ್ಲ.
ಹರಸಾಹಸ ಪಟ್ಟು ಅನಿಲ್ ಶವವನ್ನು ಅಂತ್ಯಸಂಸ್ಕಾರಕ್ಕಾಗಿ ಚಿತಾಗಾರಕ್ಕೆ ಸಾಗಿಸಲಾಗಿತ್ತು. ಈ ವೇಳೆ ಆತನ 11ರ ಹರೆಯದ ಪುತ್ರ ತಂದೆಯ ಮುಖದ ಮೇಲಿನ ಬಟ್ಟೆಯನ್ನು ಸರಿಸಿ ಎರಡೂ ಕೈಗಳಿಂದ ತಂದೆಯ ಕೆನ್ನೆಗಳನ್ನು ಹಿಡಿದುಕೊಂಡಿದ್ದ. ‘ಪಾಪಾ’ ಎಂದಷ್ಟೇ ಹೇಳಲು ಆತನಿಗೆ ಸಾಧ್ಯವಾಗಿದ್ದು, ಆತ ಒಂದೇ ಸವನೆ ಶೋಕಿಸತೊಡಗಿದ್ದ. ಇದೇ ವೇಳೆ ಅಲ್ಲಿದ್ದ ಆಂಗ್ಲ ದೈನಿಕವೊಂದರ ವರದಿಗಾರ ಶಿವ ಸನ್ನಿ ಈ ದೃಶ್ಯವನ್ನು ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು.
ಸೆ.17ರಂದು ಈ ಚಿತ್ರವನ್ನು ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ್ದ ಅವರು ‘ದಿಲ್ಲಿಯ ಒಳಚರಂಡಿಗೆ ಶುಕ್ರವಾರ ಇನ್ನೋರ್ವ ಕಾರ್ಮಿಕ ಬಲಿಯಾಗಿದ್ದಾನೆ. ಮೃತಕುಟುಂಬದ ಬಳಿ ಅಂತ್ಯಸಂಸ್ಕಾರಕ್ಕೂ ಹಣವಿಲ್ಲ’ ಎಂಬ ಪುಟ್ಟ ಅಡಿಬರಹವನ್ನೂ ಚಿತ್ರಕ್ಕೆ ನೀಡಿದ್ದರು.
ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದಾಗ ಅನಿಲ್ ಕುಟುಂಬದ ಕರುಣಾಜನಕ ಕಥೆಗೆ ನೆಟಿಜನ್ಗಳಿಂದ ಭಾರೀ ಸ್ಪಂದನೆ ವ್ಯಕ್ತವಾಗಿತ್ತು ಮತ್ತು ಕುಟುಂಬದ ನೆರವಿಗಾಗಿ ಕ್ರೌಡ್ ಫಂಡಿಂಗ್ ಅಭಿಯಾನವನ್ನು ಆರಂಭಿಸಿದ್ದರು. ಕೇವಲ ಎರಡೇ ದಿನಗಳಲ್ಲಿ ಅನಿಲ್ ಕುಟುಂಬಕ್ಕೆ 50 ಲ.ರೂ.ಗಳ ನೆರವು ಹರಿದು ಬಂದಿದೆ!
ಬಹುಶಃ ಮಾತುಗಳಿಂದ ಸಾಧ್ಯವಾಗದ ಕಾರ್ಯವನ್ನು ಇದೊಂದು ಚಿತ್ರವು ಮಾಡಿದೆ. ಶಿವ ಸನ್ನಿ ಅವರ ಕಾರ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಶಂಸೆಗಳು ಹರಿದುಬಂದಿವೆ.