ನ್ಯಾಯ ಕಡೆಗಣಿಸಿದರೆ ಅಯೋಧ್ಯೆಯಲ್ಲಿ ಮಹಾಭಾರತ ನಡೆಯಬಹುದು ಎಂದ ಮೋಹನ್ ಭಾಗವತ್
ಹೊಸದಿಲ್ಲಿ, ಸೆ.21: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಹೇಳಿದ ಮರುದಿನವೇ ಇನ್ನೊಂದು ಹೇಳಿಕೆ ನೀಡಿದ ಅರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ನ್ಯಾಯ ಆದಷ್ಟು ಬೇಗ ಒದಗಿಸಬೇಕು, ನ್ಯಾಯ ಮತ್ತು ಸತ್ಯವನ್ನು ಕಡೆಗಣಿಸಿದರೆ ಅಯೋಧ್ಯೆಯಲ್ಲಿ ಇನ್ನೊಂದು `ಮಹಾಭಾರತ' ನಡೆಯಬಹುದು'' ಎಂದಿದ್ದಾರೆ.
`ಅಯ್ಯೋಧ್ಯಾ ಕಾ ಚಸ್ಮ್ದೀದ್' ಹಾಗೂ `ಯುದ್ಧ ಮೇ ಅಯೋಧ್ಯೆ'' ಎಂಬ ಹೇಮಂತ್ ಶರ್ಮ ಅವರ ಎರಡು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ``ಹಾಗಾಗಬಾರದು, ಆದರೆ ಅದು ನಡೆಯುವುದು, ಇದನ್ನು ತಪ್ಪಿಸಲು ಯಾರಿಂದ ಸಾಧ್ಯ?'' ಎಂದರು.
ಅಯೋಧ್ಯೆ ಶ್ರೀರಾಮ ಹುಟ್ಟಿದ ಸ್ಥಳ, ರಾಮ ಮಂದಿರ ಧ್ವಂಸಗೈದ ಸ್ಥಳದಲ್ಲಿಯೇ ರಾಮ ಮಂದಿರ ನಿರ್ಮಾಣವಾಗಬೇಕು,'' ಎಂದು ತಮ್ಮ ಬುಧವಾರದ ಹೇಳಿಕೆಯನ್ನು ಅವರು ಪುನರುಚ್ಛರಿಸಿದರು.
“ನಾವು ಸುಳ್ಳು ಮತ್ತು ಅನ್ಯಾಯದ ಜತೆಗೆ ಮುನ್ನಡೆದರೆ, ಅದರ ಬೆನ್ನಿಗೆ ಹಿಂಸೆ ಸಾಗುವುದು, ಅಹಿಂಸೆ ಸತ್ಯದ ಜತೆಗಿರುತ್ತದೆ, ಸತ್ಯ ಮತ್ತು ಅಹಿಂಸೆಯಿದ್ದಲ್ಲಿ ಮಾತ್ರ ನ್ಯಾಯ ದೊರಕುತ್ತದೆ'' ಎಂದು ಭಾಗವತ್ ಹೇಳಿದರು. “ನಾವು ಸತ್ಯವನ್ನು ಎದುರಿಸಲೇಬೇಕು, ಆದಷ್ಟು ಬೇಗ ನ್ಯಾಯ ದೊರಕಬೇಕು, ವಿಳಂಬ ನಡೆಯದು'' ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಅಯೋಧ್ಯೆ ಆಂದೋಲನವು ಸ್ವತಂತ್ರ ಭಾರತದಲ್ಲಿ ನಡೆದ ಅತಿ ದೊಡ್ಡ ಆಂದೋಲನ ಎಂದರು. “ರಾಮ ಮತ್ತು ಅಯೋಧ್ಯೆಯನ್ನು ಪ್ರತ್ಯೇಕಿಸಲಾಗದು, ರಾಮ ರಾಜ್ಯವೆಂದರೆ ಉತ್ತಮ ಆಡಳಿತ, ರಾಮನೆಂದರೆ ಒಬ್ಬ ಮಾದರಿ ಆಡಳಿತಗಾರ'' ಎಂದು ಅವರು ಹೇಳಿದರು.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.