ಮಧುಮೇಹ, ಕ್ಯಾನ್ಸರ್ಗೆ ಜನಸಂಖ್ಯಾಧಾರಿತ ಪರೀಕ್ಷೆ ನಡೆಸಲಿರುವ ಸರಕಾರ
ಹೊಸದಿಲ್ಲಿ, ಸೆ.21: ರಾಷ್ಟ್ರೀಯ ಆರೋಗ್ಯ ಯೋಜನೆ (ಎನ್ಎಚ್ಎಂ) ಅಡಿ ಸರಕಾರವು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಮೂರು ರೀತಿಯ ಸಾಮಾನ್ಯ ಕ್ಯಾನ್ಸರ್ಗಳನ್ನು ಜನಸಂಖ್ಯೆ ಆಧರಿಸಿ ಪರೀಕ್ಷೆ ನಡೆಸಲು ನಿರ್ಧರಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ತಿಳಿಸಿದ್ದಾರೆ.
ಆಯುಷ್ಮಾನ್ ಭಾರತ ಯೋಜನೆಯಡಿ 1.5 ಲಕ್ಷ ಉಪಕೇಂದ್ರಗಳು ಮತ್ತು ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಪರಿವರ್ತಿಸಿ ಆ ಮೂಲಕ ಸಾಂಕ್ರಾಮಿಕವಲ್ಲದ ರೋಗಗಳೂ (ಎನ್ಸಿಡಿ) ಸೇರಿ 12 ವಿವಿಧ ಆರೋಗ್ಯ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಎನ್ಸಿಡಿ ಕಾಯಿಲೆಗಳ ಪೈಕಿ, ಅಧಿಕ ರಕ್ತದೊತ್ತಡ, ಮಧುಮೇಹ, ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ಗೆ ಪರೀಕ್ಷೆ ನಡೆಸಲಾಗುವುದು ಮತ್ತು 30ಕ್ಕಿಂತ ಮೇಲಿನ ಪ್ರಾಯದ ಎಲ್ಲ ಪುರುಷ ಮತ್ತು ಮಹಿಳೆಯರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಆಯುಷ್ಮಾನ್ ಭಾರತದ ಸಮಗ್ರ ಪ್ರಾಥಮಿಕ ಆರೋಗ್ಯ ಸುರಕ್ಷತೆ ಕಾರ್ಯಕ್ರಮದ ಭಾಗಗಳಲ್ಲಿ ಒಂದಾಗಿರುವ ಈ ಕಾರ್ಯಕ್ರಮವು ಈಗಾಗಲೇ ದೇಶಾದ್ಯಂತ 200 ಜಿಲ್ಲೆಗಳಲ್ಲಿ ಆರಂಭವಾಗಿದೆ. ಎನ್ಸಿಡಿ ಕಾಯಿಲೆಗಳ ಪತ್ತೆ, ತಡೆ, ನಿಯಂತ್ರಣ ಮತ್ತು ವ್ಯವಸ್ಥಾಪನೆಗೆ ತಾಂತ್ರಿಕ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆರೋಗ್ಯ ಸಚಿವಾಲಯವು ಡೆಲ್ ಮತ್ತು ಟಾಟಾ ಟ್ರಸ್ಟ್ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಸಚಿವೆ ತಿಳಿಸಿದ್ದಾರೆ.