2019ರಲ್ಲಿ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ: ಪ್ರಧಾನಿ ಮೋದಿ
ಭುವನೇಶ್ವರ, ಸೆ.22: ಒಡಿಶಾದ ತಲ್ಚೆರ್ ರಸಗೊಬ್ಬರ ಯೋಜನೆಗಳ ಕಾಮಗಾರಿಗೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮೂರು ವರ್ಷಗಳ ಬಳಿಕ ನಾನೇ ಈ ಘಟಕವನ್ನು ಉದ್ಘಾಟಿಸಲಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ 2019ರ ಲೋಕಸಭಾ ಚುನಾವಣೆಯಲ್ಲಿ ತಾನೇ ಮತ್ತೆ ಅಧಿಕಾರಕ್ಕೆ ಬರುತ್ತೇನೆಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.
ರಾಜ್ಯದಲ್ಲಿ ಆಯುಶ್ಮಾನ್ ಆರೋಗ್ಯ ವಿಮೆಯನ್ನು ಆರಂಭಿಸುವಂತೆ ವೇದಕೆಯಲ್ಲಿದ್ದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ರನ್ನು ಮೋದಿ ವಿನಂತಿಸಿಕೊಂಡರು.
ಪ್ರಧಾನಿ ಮೋದಿ ಅವರು ದೇಶದಲ್ಲಿ ಪ್ರಥಮ ಕಲ್ಲಿದ್ದಲು ಅನಿಲೀಕರಣ ಆಧಾರಿತ ಯೂರಿಯಾ ಹಾಗೂ ಅಮೋನಿಯ ಘಟಕದ ಕಾಮಗಾರಿಗೆ ಚಾಲನೆ ನೀಡಿದರು. ‘‘ನಾನು ಯೋಜನೆಯ ಉದ್ಘಾಟನೆಗೆ ತೆರಳಿದ ಸಂದರ್ಭದಲ್ಲಿ ಅಧಿಕಾರಿಗಳ ಬಳಿ ಇದು ಯಾವಾಗ ಉತ್ಪಾದನೆ ಆರಂಭಿಸುತ್ತದೆ ಎಂದು ಕೇಳುತ್ತೇನೆ. ರಸಗೊಬ್ಬರ ಯೋಜನೆ ಕಾಮಗಾರಿ ಕೊನೆಗೊಳ್ಳಲು 36 ತಿಂಗಳು ಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. ನಾನೇ ಬಂದು ಈ ಯೋಜನೆಯನ್ನು ಉದ್ಘಾಟಿಸುತ್ತೇನೆ’’ ಎಂದು ಎರಡು ಭಾಷಣಗಳಲ್ಲಿ ಮೂರು ಬಾರಿ ಈ ಮಾತನ್ನು ಪುನರಾವರ್ತಿಸಿದರು.