ಬಾಂಗ್ಲಾ ನಿರಾಶ್ರಿತರನ್ನು ಗೆದ್ದಲುಗಳಿಗೆ ಹೋಲಿಸಿದ ಅಮಿತ್ ಶಾ !
ಕೋಟಾ, ಸೆ. 23: ಬಾಂಗ್ಲಾದೇಶಿ ನಿರಾಶ್ರಿತರು ಗೆದ್ದಲುಗಳಿದ್ದಂತೆ. ಅವರನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
"ಅಕ್ರಮ ನುಸುಳುಕೋರರು ದೇಶವನ್ನು ಗೆದ್ದಲುಗಳಂತೆ ತಿಂದಿದ್ದಾರೆ" ಎಂದು ಸವಾಯಿ ಮಾಧೋಪುರದ ಗಂಗಾಪುರ ಎಂಬಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಹೇಳಿದರು.
ಅಸ್ಸಾಂ ಇತ್ತೀಚೆಗೆ ಪ್ರಕಟಿಸಿದ ಕರಡು ನ್ಯಾಷನಲ್ ರಿಜಿಸ್ಟ್ರಿ ಆಫ್ ಸಿಟಿಜನ್ಸ್ (ಎನ್ಆರ್ಸಿ) ಉಲ್ಲೇಖಿಸಿದ ಶಾ, "ಬಿಜೆಪಿ ಸರ್ಕಾರ ಎನ್ಆರ್ಸಿ ಜಾತಿಗೆ ತಂದಿದೆ. ಮೊದಲ ಹಂತದಲ್ಲಿ ಸುಮಾರು 40 ಲಕ್ಷ ಅಕ್ರಮ ವಲಸಿಗರನ್ನು ಪತ್ತೆ ಹೆಚ್ಚಿದೆ. ಪ್ರತಿಯೊಬ್ಬ ನುಸುಳುಕೋರರನ್ನು ಕೂಡಾ ಬಿಜೆಪಿ ಸರ್ಕಾರ ಪತ್ತೆ ಮಾಡಲಿದೆ. ಪ್ರತಿಯೊಬ್ಬರನ್ನೂ ಮತದಾರರ ಪಟ್ಟಿಯಿಂದ ಕಿತ್ತುಹಾಕಲಿದೆ" ಎಂದರು.
ಬಿಜೆಪಿ ಸರ್ಕಾರದ ಸಾಧನೆಯ ಲೆಕ್ಕ ಕೊಡಲಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಆದರೆ ಗಾಂಧಿ ಕುಟುಂಬ ನಾಲ್ಕು ತಲೆಮಾರುಗಳಲ್ಲಿ ಏನು ಮಾಡಿದೆ ಎನ್ನುವುದರ ಲೆಕ್ಕ ಕೊಡಲಿ ಎಂದು ಹೇಳಿದರು.
ಬಳಿಕ ಶಕ್ತಿಕೇಂದ್ರ ಸಮ್ಮೇಳನದ ಕೋಟಾದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಎನ್ಆರ್ಸಿ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ನುಸುಳುಕೋರರ ಪರವಾಗಿ ಮಾತನಾಡಬಹುದು. ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಏಕೆಂದರೆ ನುಸುಳುಕೋರರು ಸ್ಫೋಟಗಳು ಹಾಗೂ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಾರೆ" ಎಂದು ಹೇಳಿದರು.