ದೂರುಗಳ ನಿರ್ವಹಣೆಗಾಗಿ ಭಾರತದಲ್ಲಿ ಅಧಿಕಾರಿ ನೇಮಿಸಿದ ವಾಟ್ಸ್ ಆ್ಯಪ್
ಹೊಸದಿಲ್ಲಿ, ಸೆ.23: ಸುಳ್ಳು ಸುದ್ದಿ ಸೇರಿದಂತೆ ಇತರ ದೂರುಗಳನ್ನು ನಿರ್ವಹಿಸಲು ಭಾರತದಲ್ಲಿ ಅಧಿಕಾರಿಯೊಬ್ಬರನ್ನು ನೇಮಿಸಿರುವುದಾಗಿ ವಾಟ್ಸ್ ಆ್ಯಪ್ ಹೇಳಿಕೆಯಲ್ಲಿ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಯ ಪ್ರಸಾರದಿಂದ ಗುಂಪು ಹಲ್ಲೆ ಮತ್ತು ಹತ್ಯೆಯ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ , ಸುಳ್ಳು ಸುದ್ದಿ ಪ್ರಸಾರವನ್ನು ನಿರ್ಬಂಧಿಸುವಂತೆ ಭಾರತ ಆಗ್ರಹಿಸಿತ್ತು. ಇದೀಗ ಭಾರತದಲ್ಲಿ ಕೋಮಲ್ ಲಾಹಿರಿಯನ್ನು ದೂರು ನಿರ್ವಹಣಾ ಅಧಿಕಾರಿಯಾಗಿ ನೇಮಿಸಿರುವುದಾಗಿ ಫೇಸ್ಬುಕ್ ಮಾಲಕತ್ವದ ವಾಟ್ಸ್ ಆ್ಯಪ್
ತಿಳಿಸಿದೆ. ಮೊಬೈಲ್ ಆ್ಯಪ್ , ಇ-ಮೇಲ್ ಮೂಲಕ ಅಥವಾ ಪತ್ರದ ಮೂಲಕ ಕೋಮಲ್ರನ್ನು ಸಂಪರ್ಕಿಸಿ ತಮ್ಮ ದೂರು/ಸಲಹೆ ಸಲ್ಲಿಸಬಹುದಾಗಿದೆ. ಕೋಮಲ್ ಅವರು ವಾಟ್ಸ್ ಆ್ಯಪ್ ನ ಹಿರಿಯ ನಿರ್ದೇಶಕಿ(ಜಾಗತಿಕ ಮತ್ತು ಸ್ಥಾನೀಯ ಗ್ರಾಹಕ ನಿರ್ವಹಣೆ)ಯಾಗಿದ್ದಾರೆ. ಆಗಸ್ಟ್ ಅಂತ್ಯದ ವೇಳೆಗೆ ಈ ನೇಮಕಾತಿ ಮಾಡಲಾಗಿದೆ . ಆ್ಯಪ್ನಲ್ಲಿರುವ ‘ಸೆಟ್ಟಿಂಗ್’ ಟ್ಯಾಬ್ನ ಮೂಲಕ ಗ್ರಾಹಕರು ಬೆಂಬಲ ತಂಡವನ್ನು ನೇರವಾಗಿ ಸಂಪರ್ಕಿಸಬಹುದು. ಒಂದು ವೇಳೆ ಅವರು ತಮ್ಮ ದೂರುಗಳ ಬಗ್ಗೆ ಕ್ಷಿಪ್ರ ಗಮನ ಹರಿಸಬೇಕೆಂದು ಬಯಸಿದರೆ ದೂರು ನಿರ್ವಹಣಾ ಅಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ವಾಟ್ಸ್ ಆ್ಯಪ್ ನ ಬಹುದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ 200 ಮಿಲಿಯನ್ಗೂ ಅಧಿಕ ಬಳಕೆದಾರರಿದ್ದಾರೆ.