ರಫೇಲ್ ಖರೀದಿ ಹಗರಣ: ತನಿಖೆ ನಿರಾಕರಿಸಿದ ಮೋದಿ ಸರಕಾರವನ್ನು ಟೀಕಿಸಿದ ಚಿದಂಬರಂ
ಹೊಸದಿಲ್ಲಿ, ಸೆ. 24: ಸಹ ಪಾಲುದಾರನ ಆಯ್ಕೆ ಬಗ್ಗೆ ಫ್ರಾನ್ಸ್ನ ಅಧ್ಯಕ್ಷ ಪ್ರಾಂಕೊಯಿಸ್ ಹಾಲ್ಲೊಂಡ್ ನೀಡಿದ ಹೇಳಿಕೆಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯೆ ನೀಡಿದ ಬಳಿಕ ರಫೇಲ್ ಖರೀದಿ ಒಪ್ಪಂದದದಲ್ಲಿ ನಡೆದ ಭ್ರಷ್ಟಾಚಾರದ ತನಿಖೆಗೆ ನಿರಾಕರಿಸುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರಕಾರದ ಬಗ್ಗೆ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಸೋಮವಾರ ಟೀಕಿಸಿದ್ದಾರೆ.
‘‘ಸತ್ಯಕ್ಕೆ ಎರಡು ಆಯಾಮಗಳಿಲ್ಲ.’’ ಎಂದು ಹಣಕಾಸು ಸಚಿವ ಜೇಟ್ಲಿ ಹೇಳಿದ್ದರು. ಸಂಪೂರ್ಣವಾಗಿ ಸತ್ಯ. ಆದರೆ, ಅನಂತರ ಹಣಕಾಸು ಸಚಿವರ ಪ್ರಕಾರ ಎರಡು ಆಯಾಮಗಳಿವೆ. ಯಾವ ಆಯಾಮ ಸತ್ಯ ಎಂಬುದನ್ನು ತಿಳಿಯಲು ಇರುವ ಉತ್ತಮ ದಾರಿ ಯಾವುದು ?, ಒಂದು ತನಿಖೆಗೆ ಆದೇಶ ನೀಡುವುದು, ಇನ್ನೊಂದು ಕಾಯಿನ್ ಟಾಸ್ ಮಾಡುವುದು. ಹಣಕಾಸು ಸಚಿವರು ಟಾಸ್ಗೆ ಆದ್ಯತೆ ನೀಡಬಹುದು. (ಎರಡೂ ಕಡೆಯಲ್ಲಿ ಹೆಡ್ ಇರುವ ನಾಣ್ಯಕ್ಕೆ ಆದ್ಯತೆ) ಎಂದು ಚಿದಂಬರಂ ವ್ಯಂಗ್ಯವಾಡಿದ್ದಾರೆ.
ಕೇಂದ್ರ ಸರಕಾರ ರಫೇಲ್ ಒಪ್ಪಂದದಲ್ಲಿ ನಡೆದ ಭ್ರಷ್ಚಾಚಾರದ ತನಿಖೆ ನಡೆಸದೇ ಇರುವುದು ನೋಡಿದಾಗ ಖೇದ ಉಂಟಾಗುತ್ತದೆ. 6 ತಿಂಗಳ ನಂತರ ಅಥವಾ 12 ತಿಂಗಳ ಅನಂತರ ಏನಾಗುತ್ತದೆ ಎಂಬುದು ಯಾರು ಬಲ್ಲರು ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.