ದಾಖಲೆಗಳನ್ನು ಬಹಿರಂಗಗೊಳಿಸುವ ಬಗ್ಗೆ ಪ್ರಧಾನಿ, ಗೃಹ ಸಚಿವರು ನಿರ್ಧರಿಸಬೇಕು: ಕೇಂದ್ರ ಮಾಹಿತಿ ಆಯೋಗ
ಲಾಲ್ ಬಹಾದ್ದೂರ್ ಶಾಸ್ತ್ರಿ ನಿಗೂಢ ಸಾವು
ಹೊಸದಿಲ್ಲಿ, ಸೆ.25: ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾವಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪ್ರಧಾನಿ ಮತ್ತು ಗೃಹ ಸಚಿವರ ಮುಂದಿರಿಸಿ ಅವರು ಅವುಗಳನ್ನು ಬಹಿರಂಗಪಡಿಸುವ ಕುರಿತಂತೆ ನಿರ್ಧಾರ ಕೈಗೊಳ್ಳಲು ಅನುವು ಮಾಡಿಕೊಡಬೇಕು ಎಂದು ಕೇಂದ್ರ ಮಾಹಿತಿ ಆಯೋಗವು ಪ್ರಧಾನಿ ಕಾರ್ಯಾಲಯ, ವಿದೇಶಾಂಗ ವ್ಯವಹಾರಗಳ ಹಾಗೂ ಗೃಹ ಸಚಿವಾಲಯಗಳ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಜನವರಿ 11, 1966ರಂದು ಆಗಿನ ಸೋವಿಯತ್ ಯೂನಿಯನ್ ನ ತಾಷ್ಕೆಂಟಿನಲ್ಲಿ ಸಾವನ್ನಪ್ಪಿದ್ದ ಶಾಸ್ತ್ರಿ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತೇ ಎಂಬ ಮಾಹಿತಿ ಕೋರಿ ಸಲ್ಲಿಸಲಾಗಿದ್ದ ಆರ್ಟಿಐ ಅರ್ಜಿಯೊಂದರ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
“ಶಾಸ್ತ್ರಿ ಸಾವಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯುವುದು ಸಾರ್ವಜನಿಕರ ಮೂಲಭೂತ ಹಕ್ಕಾಗಿರುವುದರಿಂದ ದಾಖಲೆಗಳನ್ನು ತಜ್ಞ ಸಮಿತಿ ಯಾ ಇತರ ಯಾವುದೇ ಪ್ರಕ್ರಿಯೆ ಮೂಲಕ ತನಿಖೆ ನಡೆಸಿ ರಹಸ್ಯವನ್ನು ಬೇಧಿಸಬೇಕು'' ಎಂದು ಕೇಂದ್ರ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
1965ರ ಭಾರತ-ಪಾಕ್ ಯುದ್ಧದ ಸಂದರ್ಭ ಪಾಕ್ ಅಧ್ಯಕ್ಷ ಮುಹಮ್ಮದ್ ಅಯೂಬ್ ಖಾನ್ ಜತೆ ಯುದ್ಧವಿರಾಮ ಘೋಷಣಾ ಪತ್ರಕ್ಕೆ ಸಹಿ ಹಾಕುವ ಕೆಲವೇ ಗಂಟೆಗಳ ಮೊದಲು ಶಾಸ್ತ್ರಿ ಸಾವನ್ನಪ್ಪಿದ್ದರು. ಎರಡೂ ದೇಶಗಳ ನಡುವೆ ಮಾತುಕತೆಗಳಿಗೆ ಆಗಿನ ಸೋವಿಯತ್ ಪ್ರಧಾನಿ ಅಲೆಕ್ಸೈ ಕೊಸಿಗಿನ್ ಮಧ್ಯಸ್ಥಿಕೆ ವಹಿಸಿದ್ದರು.
“ಶಾಸ್ತ್ರಿ ನಿಗೂಢ ಸಾವಿನ ನಂತರ ಅವರ ಖಾಸಗಿ ವೈದ್ಯರು ಮತ್ತು ಸಹಾಯಕರು ಪ್ರತ್ಯೇಕ ಅಪಘಾತದಲ್ಲಿ ಮೃತಪಟ್ಟಿದ್ದು, ರಾಜ್ಯಸಭಾ ಸಮಿತಿಯ ತನಿಖಾ ದಾಖಲೆಗಳ ನಾಪತ್ತೆ ಜತೆಗೆ ಶಾಸ್ತ್ರಿ ಪತ್ನಿ, ಕುಟುಂಬ ಸದಸ್ಯರು ಹಾಗೂ ಪತ್ರಕರ್ತರು ಎತ್ತಿದ ಹಲವಾರು ಪ್ರಶ್ನೆಗಳ ಹಿನ್ನೆಲೆಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಹೇಗೆ ತಾಷ್ಕೆಂಟ್ ನಲ್ಲಿ ಮೃತಪಟ್ಟರೆಂಬ ವಿಚಾರವನ್ನು ಜನರ ಮುಂದಿಡುವುದು ಕೇಂದ್ರ ಸರಕಾರದ ಕರ್ತವ್ಯ,'' ಎಂದು ಮಾಹಿತಿ ಆಯುಕ್ತರು ಹೇಳಿದ್ದಾರೆ.