ಈ ನಗರದಲ್ಲಿದೆ ಕಾಗೆಗಳ ಉದ್ಯಾನವನ !
ವಿದಿಶಾ, ಸೆ.25: ಕ್ಷೀಣಿಸುತ್ತಿರುವ ಕಾಗೆಗಳ ಸಂತತಿಯನ್ನು ಉಳಿಸುವ ಉದ್ದೇಶದಿಂದ ಮುಕ್ತಿಧಾಮ ಸೇವಾ ಸಮಿತಿ ಎಂಬ ಸಂಸ್ಥೆ ಮಧ್ಯ ಪ್ರದೇಶದ ವಿದಿಶದಲ್ಲಿ ದೇಶದ ಮೊದಲ ಕಾಗೆ ಉದ್ಯಾನವನವನ್ನು ನಿರ್ಮಿಸಿದೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಂಸ್ಥೆಯ ಸದಸ್ಯರೊಬ್ಬರು, ಕಾಗೆಗಳು ಧಾರ್ಮಿಕ ಮತ್ತು ವೈಜ್ಞಾನಿಕವಾಗಿ ಮುಖ್ಯವಾಗಿವೆ. ಅವುಗಳ ಸಂತತಿಯನ್ನು ಉಳಿಸಬೇಕು ಎಂಬ ಉದ್ದೇಶದಿಂದ ನಾವು ಈ ಉದ್ಯಾನವನವನ್ನು ನಿರ್ಮಿಸಿದ್ದೇವೆ. ಇಲ್ಲಿ ಈ ಹಕ್ಕಿಗಳಿಗೆ ಸರಿಯಾದ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹಿಂದೂ ಧರ್ಮದಲ್ಲಿ ಕಾಗೆಗಳನ್ನು ನಮ್ಮ ಪೂರ್ವಜರು ಎಂದು ಪರಿಗಣಿಸಲಾಗಿದೆ. ಹಾಗಾಗಿ ಅವುಗಳಿಗೆ ಆಹಾರ ನೀಡುವುದು ಪುಣ್ಯದ ಕೆಲಸ ಎಂದು ಪರಿಗಣಿಸಲ್ಪಡುತ್ತದೆ ಎಂದು ಮುನ್ಸಿಪಲ್ ಕೌನ್ಸಿಲರ್ ದಿನೇಶ್ ಕುಶ್ವಾಹ ತಿಳಿಸಿದ್ದಾರೆ. ನನ್ನ ತಂಡ ಪ್ರತಿದಿನ ಇಲ್ಲಿಗೆ ಆಗಮಿಸಿ ಕಾಗೆಗಳಿಗೆ ಆಹಾರ ನೀಡುತ್ತದೆ. ಇದು ಧಾರ್ಮಿಕ ಮತ್ತು ವೈಜ್ಞಾನಿಕ ಕಾರ್ಯವಾಗಿದೆ ಎಂದು ಎಲ್ಲರೂ ನಂಬುತ್ತಾರೆ ಎಂದು ಅವರು ತಿಳಿಸಿದ್ದಾರೆ. ಇಲ್ಲಿ ಕಾಗೆ ಉದ್ಯಾನವನ್ನು ನಿರ್ಮಿಸುವ ಹಿಂದೆ ಇದ್ದ ಇನ್ನೊಂದು ಕಾರಣವೆಂದರೆ ಪಿತೃಪಕ್ಷ. ಅಂದು ಹಿಂದುಗಳು ತಮ್ಮನ್ನು ಅಗಲಿದ ಪೂರ್ವಜರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾರೆ ಎಂದು ಸಂಸ್ಥೆಯ ಸದಸ್ಯರು ತಿಳಿಸಿದ್ದಾರೆ.