ಮತ ಬ್ಯಾಂಕ್ ರಾಜಕಾರಣ ದೇಶವನ್ನು ಗೆದ್ದಲಿನಂತೆ ತಿನ್ನುತ್ತಿದೆ: ಪ್ರಧಾನಿ
ಹೊಸದಿಲ್ಲಿ, ಸೆ. 25: ಮತ ಬ್ಯಾಂಕ್ ರಾಜಕಾರಣ ದೇಶವನ್ನು ಗೆದ್ದಲಿನಂತೆ ತಿನ್ನುತ್ತಿದೆ. ಈ ರೀತಿಯ ರಾಜಕಾರಣಕ್ಕೆ ಅಂತ್ಯ ಹಾಡುವುದು ಬಿಜೆಪಿಯ ಕರ್ತವ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭೋಪಾಲದಲ್ಲಿ ಬುಧವಾರ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಒಳಗೊಳ್ಳುವಿಕೆಯ ರಾಜಕಾರಣದ ಬದಲಿಗೆ ಮತ ಬ್ಯಾಂಕ್ ರಾಜಕಾರಣ ಅಸ್ತಿತ್ವದಲ್ಲಿ ಇದೆ ಎಂದರು.
ಎಲ್ಲರೊಂದಿಗೆ ಎಲ್ಲರ ವಿಕಾಸ ಕೇವಲ ಭರವಸೆ ಅಲ್ಲ. ಇದು ಕೋಟಿಗಟ್ಟಲೆ ಭಾರತೀಯರಿಗಾಗಿ ನಡೆಸಿದ ಚಿಂತನೆ. ಯಾವುದೇ ಕಾರಣಕ್ಕೆ ಹಿಂದುಳಿದ ಪ್ರತಿಯೊಬ್ಬರನ್ನು ಮುಂದೆ ತರುವ ಉದ್ದೇಶವನ್ನು ಇದು ಹೊಂದಿದೆ ಎಂದು ಅವರು ಸರಕಾರದ ಘೋಷಣೆ ಉದ್ದೇಶಿಸಿ ಹೇಳಿದರು.
ಭಾರತದಲ್ಲಿ ಮೈತ್ರಿ ರೂಪಿಸುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ. ಆದುದರಿಂದ ಅದು ವಿದೇಶದ ಮೈತ್ರಿ ಕೋರುತ್ತದೆ. ಭಾರತದ ಪ್ರಧಾನಿ ಯಾರು ಎಂಬುದನ್ನು ವಿದೇಶ ನಿರ್ಧರಿಸಬೇಕೇ ?, ಅಧಿಕಾರ ಕಳೆದುಕೊಂಡ ಬಳಿಕ ಕಾಂಗ್ರೆಸ್ ಸಮತೋಲನ ಕಳೆದುಕೊಂಡಂತೆ ಕಾಣುತ್ತಿದೆ ಎಂದು ಅವರು ಹೇಳಿದರು.
Next Story