ನೀರವ್ ಮೋದಿ, ಚೋಕ್ಸಿ ಪರಾರಿಯಾಗಲು ಹಸ್ಮುಖ್ ಅಧಿಯರಿಂದ ಸಹಾಯ: ಸುಬ್ರಮಣಿಯನ್ ಸ್ವಾಮಿ
ಪ್ರಕರಣ ದಾಖಲಿಸಲು ಅನುಮತಿ ಕೇಳಿ ಜೇಟ್ಲಿಗೆ ಪತ್ರ
ಹೊಸದಿಲ್ಲಿ,ಸೆ.26: ವಿತ್ತ ಕಾರ್ಯದರ್ಶಿ ಹಸ್ಮುಖ್ ಅಧಿಯ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಆರಂಭಿಸಲು ಅನುಮತಿ ನೀಡುವಂತೆ ಕೋರಿ ವಿತ್ತ ಸಚಿವ ಅರುಣ್ ಜೇಟ್ಲಿಗೆ ಪತ್ರ ಬರೆದಿರುವುದಾಗಿ ಬಿಜೆಪಿಯ ಹಿರಿಯ ನಾಯಕ ಸುಬ್ರಮಣ್ಯನ್ ಸ್ವಾಮಿ ತಿಳಿಸಿದ್ದಾರೆ. ಅಧಿಯ ಅನೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ದೇಶ ಬಿಟ್ಟು ಪರಾರಿಯಾಗಲು ಸಹಾಯ ಮಾಡಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದಾರೆ. ನೀರವ್ ಮೋದಿ ಜೊತೆ ಅಧಿಯ ಈಗಲೂ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಿರುವ ಸ್ವಾಮಿ, ಅವರು ಈಗಲೂ ಮೋದಿಗೆ ರಕ್ಷಣೆಯನ್ನು ಒದಗಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸ್ವಾಮಿ, ಪತ್ರದಲ್ಲಿ ತಿಳಿಸಲಾಗಿರುವ ಭ್ರಷ್ಟಾಚಾರ ಚಟುವಟಿಕೆಗಳಲ್ಲಿ ಮಾತ್ರವಲ್ಲ ಇತರ ಅನೇಕ ಪ್ರಕರಣಗಳಲ್ಲಿ ಅಧಿಯ ಭಾಗಿಯಾಗಿದ್ದಾರೆ. ಪಿ.ಚಿದಂಬರಂ ಮತ್ತು ಸೋನಿಯಾ ಗಾಂಧಿಯಂತಹ ಭ್ರಷ್ಟ ಜನರನ್ನು ರಕ್ಷಿಸುವಲ್ಲೂ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಇವರ ವಿರುದ್ಧ ಮಾತನಾಡಿದ ಅಧಿಕಾರಿಗಳನ್ನು ಅಧಿಯ ವರ್ಗಾವಣೆ ಮಾಡಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದಾರೆ.