ಸುಪ್ರೀಂ ತೀರ್ಪು ಪುರುಷರಿಗೆ ತಾರತಮ್ಯ ಎಸಗಿದೆ: ರಾಜೇಶ್ ವಖರಿಯಾ
ವ್ಯಭಿಚಾರ ಕ್ರಿಮಿನಲ್ ಅಪರಾಧ ಅಲ್ಲ
ಹೊಸದಿಲ್ಲಿ, ಸೆ. 27: ಸುಪ್ರೀಂ ಕೋರ್ಟ್ ವ್ಯಭಿಚಾರದ ಕುರಿತು ನೀಡಿದ ತೀರ್ಪು ಪುರುಷನ ವಿರುದ್ಧ ತಾರತಮ್ಯ ಧೋರಣೆ ಹೊಂದಿದೆ. ಇದು ದೇಶದಲ್ಲಿರುವ ಪುರುಷರ ಕೆಲವು ಹಕ್ಕುಗಳನ್ನು ನಾಶ ಮಾಡಿದೆ ಎಂದು ಪುರುಷರ ಹಕ್ಕುಗಳ ಹೋರಾಟಗಾರ ರಾಜೇಶ್ ವಖರಿಯಾ ಪ್ರತಿಪಾದಿಸಿದ್ದಾರೆ. ಸುಪ್ರೀಂ ಕೋರ್ಟ್ ವ್ಯಭಿಚಾರವನ್ನು ಅಪರಾಧೀ ಕರಣಗೊಳಿಸುವ ಬದಲು ಲಿಂಗತ್ವ ಸ್ಥಿರಗೊಳಿಸಬೇಕಿತ್ತು ಎಂದು ಪುರುಷರ ಹಕ್ಕುಗಳಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಸರಕಾರೇತರ ಸಂಸ್ಥೆ ಡಾಮ್ಯಾನ್ನ ಸಂಚಾಲಕರಾಗಿರುವ ವಖರಿಯಾ ತಿಳಿಸಿದ್ದಾರೆ. ‘‘ನಮ್ಮ ಕಾನೂನು ಸಂಪೂರ್ಣವಾಗಿ ಮಹಿಳೆಯರ ಪರವಾಗಿ ಇದೆ. ಪುರುಷನ ವ್ಯಭಿಚಾರವನ್ನು ಕ್ರಿಮಿನಲ್ ಅಪರಾಧ ಎಂದಿದ್ದ ಕಾನೂನಿನಲ್ಲಿ ಮಹಿಳೆಯರ ವ್ಯಭಿಚಾರವನ್ನು ಕೂಡ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿ ಎಂದು ಈ ಹಿಂದೆ ನಾವು ಹೇಳಿದ್ದೆವು. ಆದರೆ, ಅದಕ್ಕೆ ಬದಲಾಗಿ ವ್ಯಭಿಚಾರದ ಅಪರಾಧೀಕರಣವನ್ನೇ ರದ್ದುಗೊಳಿಸಲಾಯಿತು. ಈಗ ಪತ್ನಿಯಿಂದ ನಿರ್ಲಕ್ಷಕ್ಕೆ ಒಳಗಾಗುವ ಹಾಗೂ ಅವಮಾನ ಎದುರಿಸುವ ಪುರುಷನಿಗೆ ಏನು ಮಾಡಲು ಕೂಡ ಸಾಧ್ಯವಿಲ್ಲ’’ ಎಂದು ವಖಾರಿಯಾ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ನ ಈ ತೀರ್ಪು ವಿವಾಹ ಹಾಗೂ ವಿವಾಹದಲ್ಲಿ ಪುರುಷರ ಸ್ಥಾನವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ ಎಂದು ಇನ್ನೋರ್ವ ಪುರುಷರ ಹಕ್ಕು ಹೋರಾಟಗಾರ ಅನುಪಮ್ ದುಬೆ ಹೇಳಿದ್ದಾರೆ.