ಸ್ವಚ್ಛತಾ ಅಭಿಯಾನ: ಚರಂಡಿ ಸ್ವಚ್ಛಗೊಳಿಸಿದ ಮುಖ್ಯಮಂತ್ರಿ
ಹೊಸದಿಲ್ಲಿ, ಅ.2: ರಾಜಕಾರಣಿಗಳು ಕ್ಯಾಮೆರಾ ಎದುರು ಪೊರಕೆ ಹಿಡಿದು ಸ್ವಚ್ಛಗೊಳಿಸುವ ಘಟನೆ ಆಗಿಂದಾಗ್ಗೆ ವರದಿಯಾಗುತ್ತಿರುತ್ತದೆ. ಆದರೆ ಪುದುಚೇರಿಯ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಕೈಯಲ್ಲಿ ಸಲಿಕೆ (ಹಾರೆ) ಹಿಡಿದು ಚರಂಡಿಯೊಳಗೆ ಇಳಿದು ಚರಂಡಿ ಸ್ವಚ್ಛಗೊಳಿಸುತ್ತಿರುವ ವೀಡಿಯೊ ದೃಶ್ಯಾವಳಿ ಈಗ ವೈರಲ್ ಆಗಿದೆ.
ಬಿಳಿಬಣ್ಣದ ಶರ್ಟ್ ಹಾಗೂ ಧೋತಿಯಲ್ಲಿರುವ ಮುಖ್ಯಮಂತ್ರಿ ಧೋತಿಯನ್ನು ಮೊಣಕಾಲಿನ ವರೆಗೆ ಎತ್ತಿಕಟ್ಟಿಕೊಂಡು, ನೀಲಿಬಣ್ಣದ ಕೈಗವಸು ಹಾಕಿಕೊಂಡು ಚರಂಡಿಯಿಂದ ತ್ಯಾಜ್ಯವನ್ನು ಎತ್ತಿ ಮೇಲೆ ಹಾಕುವ ದೃಶ್ಯವಿದೆ. ಸ್ವಚ್ಛತಾ ಅಭಿಯಾನದಲ್ಲಿ ಜನತೆ ಹೆಚ್ಚಿನ ಪ್ರಮಾಣದಲ್ಲಿ ಕೈಜೋಡಿಸಬೇಕು ಎಂಬ ಉದ್ದೇಶದಿಂದ ಪ್ರಧಾನಿ ಮೋದಿ ಆರಂಭಿಸಿರುವ ‘ಸ್ವಚ್ಛತೆಯೇ ಸೇವೆ’ ಎಂಬ ಅಭಿಯಾನಕ್ಕೆ ಪೂರಕವಾಗಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ ಎಂದು ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
#SwachhataHiSeva #SwachhBharat #SwachhBharatMission cleaning at #Nellithope #Puducherry pic.twitter.com/FkeKvfClZK
— V.Narayanasamy (@VNarayanasami) October 1, 2018