ಲಕ್ನೋ ಟೆಕ್ಕಿ ಸಾವಿಗೆ ಗುಂಡೇಟು ಕಾರಣ: ಮರಣೋತ್ತರ ಪರೀಕ್ಷೆ ವರದಿ
ಲಕ್ನೋ, ಅ. 2: ಸರಕಾರಿ ಕಟ್ಟಡದಲ್ಲಿ ಅಳವಡಿಸಲಾದ ಐದು ಸಿಸಿಟಿವಿ ಕ್ಯಾಮರಾವನ್ನು ಪರ್ಯಾಯ ಮ್ಯಾಜಿಸ್ಟ್ರೇಟ್ ತನಿಖಾ ತಂಡ ಪತ್ತೆ ಹಚ್ಚಿದ್ದು, ಆ್ಯಪಲ್ ಕಾರ್ಯನಿರ್ವಾಹಕ ವಿವೇಕ್ ತಿವಾರಿ ಹತ್ಯೆ ಪ್ರಕರಣದ ಆರೋಪಿ ಕಾನ್ಸ್ಟೆಬಲ್ ಹಾಗೂ ಘಟನೆ ಬಗ್ಗೆ ಇನ್ನಷ್ಟು ವಿವರಗಳನ್ನು ಪಡೆಯಲು ಇದರ ವೀಡಿಯೊ ದೃಶ್ಯಾವಳಿ ನೆರವಾಗಲಿದೆ.
ಇಲ್ಲಿನ ಗೋಮತಿ ನಗರದಲ್ಲಿ ಹತ್ಯೆ ಘಟನೆ ನಡೆದ ಸ್ಥಳದಿಂದ ಕೇವಲ 30 ಮೀಟರ್ ದೂರದಲ್ಲಿರುವ ಉತ್ತರಪ್ರದೇಶ ರಾಜ್ಯ ನಿರ್ಮಾಣ ಸಹಕಾರಿ ಸಂಘದ ಕಟ್ಟಡ ಹಾಗೂ ಎರಡು ಗೇಟ್ಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನ್ಯಾಯಂಗ ತನಿಖೆಯ ನೇತೃತ್ವ ವಹಿಸಿರುವ ನಗರ ಹೆಚ್ಚುವರಿ ದಂಡಾಧಿಕಾರಿ ಸಲೀಲ್ ಪಟೇಲ್ ಗೋಮತಿನಗರ ಪೊಲೀಸ್ ಸರ್ಕಲ್ನ ಉಸ್ತುವಾರಿ ಚಕ್ರೇಶ್ ಮಿಶ್ರಾ ಅವರೊಂದಿಗೆ ಸೋಮವಾರ ಸಂಘಕ್ಕೆ ಭೇಟಿ ನೀಡಿದ್ದರು. ಅವರು ಸಂಘದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು ಹಾಗೂ ಸಿಸಿಟಿವಿ ದೃಶ್ಯಾವಳಿ ನೀಡುವಂತೆ ನಿರ್ದೇಶಿಸಿದ್ದರು. ತಿವಾರಿ ಅವರ ಎಡ ಬದಿಯ ಗಲ್ಲಕ್ಕೆ ಗುಂಡೇಟು ತಗುಲಿ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ.