ಮಧ್ಯ ಪ್ರದೇಶ, ರಾಜಸ್ಥಾನ ಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ: ಮಾಯಾವತಿ
ದಿಗ್ವಿಜಯ ಸಿಂಗ್ ಬಿಜೆಪಿ ಏಜೆಂಟ್ ಎಂದ ಬಿಎಸ್ಪಿ ನಾಯಕಿ
ಕೈ ಪಕ್ಷದ ವಿರುದ್ಧ ವಾಗ್ದಾಳಿ
ಹೊಸದಿಲ್ಲಿ, ಅ.3: ಮಧ್ಯ ಪ್ರದೇಶ ಮತ್ತು ರಾಜಸ್ಥಾನ ಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಬಿಎಸ್ಪಿಯನ್ನು ಮುಗಿಸಲು ಯತ್ನಿಸುತ್ತಿದೆ ಎಂದರು. “ಏಕಾಂಗಿಯಾಗಿ ಬಿಜೆಪಿಯನ್ನು ಸೋಲಿಸಬಹುದು ಎಂದು ಕಾಂಗ್ರೆಸ್ ತಿಳಿದುಕೊಂಡಿದೆ. ಆದರೆ ವಾಸ್ತವವೇನೆಂದರೆ ಜನರು ಕಾಂಗ್ರೆಸ್ ನ ಭ್ರಷ್ಟಾಚಾರ ಮತ್ತು ತಪ್ಪುಗಳನ್ನು ಇನ್ನೂ ಕ್ಷಮಿಸಿಲ್ಲ” ಎಂದು ಮಾಯಾವತಿ ಹೇಳಿದರು,
“ರಾಜಸ್ತಾನದಲ್ಲಿ ವಿಧಾನಸಭಾ ಸೀಟುಗಳಲ್ಲಿ ಕಾಂಗ್ರೆಸ್ 200ರಲ್ಲಿ ಕೇವಲ 9 ಸೀಟುಗಳನ್ನು ನೀಡುವುದಾಗಿ ಹೇಳಿದೆ. ಮಧ್ಯ ಪ್ರದೇಶದಲ್ಲಿ 230ರಲ್ಲಿ 15ರಿಂದ 20 ಸೀಟುಗಳನ್ನು ನೀಡುವುದಾಗಿ ಹೇಳುತ್ತಿದೆ. ಛತ್ತೀಸ್ ಗಡದ 90 ಸೀಟುಗಳಲ್ಲಿ 5ರಿಂದ 6 ಸೀಟುಗಳನ್ನು ನೀಡುವುದಾಗಿ ಹೇಳುತ್ತಿದೆ. ನಾವು ಮೈತ್ರಿಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನಮ್ಮ ಎಲ್ಲಾ ಮತಗಳು ಕಾಂಗ್ರೆಸ್ ಗೆ ಹೋಗುವುದನ್ನು ನಾವು ಗಮನಿಸಿದ್ದೇವೆ. ಕೋಮುವಾದಿ ಶಕ್ತಿಗಳನ್ನು ಜನರಿಂದ ದೂರವಿಡುವುದಕ್ಕಾಗಿ ನಾವು ಕಾಂಗ್ರೆಸ್ ಜೊತೆ ಕೈಜೋಡಿಸುತ್ತಿದ್ದೆವು. ಆದರೆ ಅವರು ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ದಿಗ್ವಿಜಯ ಸಿಂಗ್ ಓರ್ವ ಬಿಜೆಪಿ ಏಜೆಂಟ್. ಕೇಂದ್ರದಿಂದ ಮಾಯಾವತಿಗೆ ಒತ್ತಡವಿದೆ. ಆದ್ದರಿಂದ ಅವರು ನಮ್ಮ ಜೊತೆ ಕೈಜೋಡಿಸುತ್ತಿಲ್ಲ ಎಂದು ಅವರು ಹೇಳುತ್ತಾರೆ. ಇದು ಆಧಾರರಹಿತ” ಎಂದವರು ಹೇಳಿದರು.