ರಫೇಲ್ ಭಾರತದ ಯುದ್ಧತಂತ್ರದ ದಿಕ್ಕನ್ನು ಬದಲಿಸಲಿದೆ: ವಾಯುಪಡೆ ಮುಖ್ಯಸ್ಥ
ಹೊಸದಿಲ್ಲಿ, ಅ.3: ರಫೇಲ್ ಯುದ್ಧ ವಿಮಾನ ಖರೀದಿಯ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಮಧ್ಯೆಯೇ ಈ ಬಗ್ಗೆ ಹೇಳಿಕೆ ನೀಡಿರುವ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಶಲ್ ಬಿ.ಎಸ್.ಧನೊವಾ, ಈ ಒಪ್ಪಂದ ಒಂದು ಉತ್ತಮ ವ್ಯವಹಾರವಾಗಿದೆ ಮತ್ತು ರಫೇಲ್ ವಿಮಾನ ಉಪಖಂಡದ ರಕ್ಷಣಾ ಕ್ಷೇತ್ರದ ದಿಕ್ಕನ್ನು ಬದಲಿಸಲಿದೆ ಎಂದು ಅಭಿಪ್ರಾಯಿಸಿದ್ದಾರೆ.
ಡಸಾಲ್ಟ್ ಏವಿಯೇಶನ್ ಭಾರತದಲ್ಲಿ ತನ್ನ ಜೊತೆಗಾರ ಸಂಸ್ಥೆಯನ್ನು ಆಯ್ಕೆ ಮಾಡಿದ್ದು ಈ ಪ್ರಕ್ರಿಯೆಯಲ್ಲಿ ಸರಕಾರ ಅಥವಾ ಭಾರತೀಯ ಸೇನೆಯ ಪಾತ್ರವಿರಲಿಲ್ಲ. ರಫೇಲ್ ಒಂದು ಉತ್ತಮ ಯುದ್ಧವಿಮಾನವಾಗಿದ್ದು ಉಪಖಂಡದ ರಕ್ಷಣಾ ಕ್ಷೇತ್ರದ ದಿಕ್ಕನ್ನೇ ಬದಲಿಸಲಿದೆ ಎಂದು ಧೊನೊವಾ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ರಫೇಲ್ ಒಪ್ಪಂದದಲ್ಲಿ ಸರಕಾರ ಅನಿಲ್ ಅಂಬಾನಿಯ ರಿಲಾಯನ್ಸ್ ಡಿಫೆನ್ಸ್ ಲಿ.,ಗೆ ಲಾಭ ಮಾಡುತ್ತಿದೆ ಎಂದು ಕಾಂಗ್ರೆಸ್ ಸಹಿತ ಇತರ ವಿರೋಧ ಪಕ್ಷಗಳು ಆರೋಪಿಸಿವೆ. ರಫೆಲ್ ಒಪ್ಪಂದದಲ್ಲಿ ಭಾರತದ ಜೊತೆಗಾರನ ಆಯ್ಕೆಗೆ ಯಾವುದೇ ಅವಕಾಶ ನೀಡಿರಲಿಲ್ಲ ಎಂದು ಕಳೆದ ತಿಂಗಳು ಫ್ರಾನ್ಸ್ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಹೇಳಿಕೆ ನೀಡುವ ಮೂಲಕ ಇಡೀ ವಿವಾದಕ್ಕೆ ಹೊಸ ತಿರುವು ನೀಡಿದ್ದರು.