ಉದ್ಧವ್ ಠಾಕ್ರೆಯಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ: ಸಾಮ್ನಾ
ಮುಂಬೈ, ಅ. 5: ರಾಮ ಮಂದಿರ ನಿರ್ಮಾಣ ಮಾಡಲು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಶೀಘ್ರ ಅಯೋಧ್ಯೆಗೆ ತೆರಳಲಿದ್ದಾರೆ. ಅಕ್ಟೋಬರ್ 18ರಂದು ನಡೆಯಲಿರುವ ಪಕ್ಷದ ದಸರಾ ರ್ಯಾಲಿಯಲ್ಲಿ ಈ ಬಗ್ಗೆ ಖಚಿತ ಕಾರ್ಯಕ್ರಮಗಳ ಘೋಷಣೆ ಮಾಡಲಾಗುವುದು ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ಹೇಳಿದೆ.
ರಾಮಜನ್ಮಭೂಮಿ ಟ್ರಸ್ಟ್ನ ಮುಖ್ಯಸ್ಥ ಜನಮೇಜಯ ಶರಣ್ ಜಿ ಮಹಾರಾಜ್ ಅವರನ್ನು ಇಲ್ಲಿನ ಸೇನಾ ಭವನದಲ್ಲಿ ಭೇಟಿಯಾದ ಬಳಿಕ ಶಿವಸೇನೆಯ ವರಿಷ್ಠರ ಈ ನಿರ್ಧಾರ ಹೊರಬಿದ್ದಿದೆ ಎಂದು ಸಾಮ್ನಾ ಹೇಳಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಧೈರ್ಯ ಇರುವುದು ಶಿವಸೇನೆಗೆ ಮಾತ್ರ ಎಂದು ಟ್ರಸ್ಟ್ನ ಮುಖ್ಯಸ್ಥರು ಉದ್ಧವ್ ಠಾಕ್ರೆ ಅವರಲ್ಲಿ ಹೇಳಿರುವುದಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಸೇನೆಯ ಸದಸ್ಯರು ತಿಳಿಸಿದ್ದಾರೆ. “ನಿಮ್ಮ ತಂದೆ ಬಾಳಾ ಸಾಹೇಬ್ ಠಾಕ್ರೆ ಅವರು ಬಾಬ್ರಿ ಮಸೀದಿ ಧ್ವಂಸಕ್ಕೆ ಕೊಡುಗೆ ನೀಡಿದ್ದರು’’. ನೀವು ಅಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಕೊಡುಗೆ ನೀಡಬೇಕು ಎಂದು ಟ್ರಸ್ಟ್ ಮುಖ್ಯಸ್ಥರು ಸೇನಾ ವರಿಷ್ಠರಿಗೆ ತಿಳಿಸಿರುವುದಾಗಿ ಅವರು ತಿಳಿಸಿದ್ದಾರೆ.
ಈಗ ರಾಮ ಮಂದಿರ ನಿರ್ಮಾಣ ಮಾಡಲು ಸಾಧ್ಯವಾಗದೇ ಇದ್ದರೆ, ಇನ್ನು ಮುಂದೆ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಶಿವಸೇನೆ ವಕ್ತಾರ ಸಂಜಯ್ ರಾವ್ ಹೇಳಿದ್ದಾರೆ.
ಬಹುಮತವಿದ್ದರೂ ರಾಮಮಂದಿರ ನಿರ್ಮಾಣಕ್ಕೆ ವಿಳಂಬ ಮಾಡುತ್ತಿರುವ ಬಿಜೆಪಿಯನ್ನು ಶಿವಸೇನೆ ಆಗಾಗ ಟೀಕಿಸುತ್ತಿದೆ.