ಆ್ಯಪಲ್ ಕಾರ್ಯನಿರ್ವಹಣಾಧಿಕಾರಿ ಹತ್ಯೆ ಆರೋಪಿಯನ್ನು ಬೆಂಬಲಿಸಿದವರ ವಿರುದ್ಧ ಎಫ್ಐಆರ್
ಲಕ್ನೋ, ಅ. 5: ಆ್ಯಪಲ್ ಕಾರ್ಯನಿರ್ವಹಣಾಧಿಕಾರಿ ವಿವೇಕ್ ತೀವಾರಿ ಅವರನ್ನು ಹತ್ಯೆಗೈದ ಆರೋಪಿ ಪೊಲೀಸ್ ಕಾನ್ಸ್ಟೆಬಲ್ ಪ್ರಶಾಂತ್ ಚೌಧರಿ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲ ತಾಣದಲ್ಲಿ ಅಭಿಯಾನ ಆರಂಭಿಸಿದ ಪೊಲೀಸರ ವಿರುದ್ಧ ರಾಜ್ಯ ಪೊಲೀಸ್ ಕ್ರಮ ಕೈಗೊಳ್ಳಲು ಆರಂಭಿಸಿದೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಐಜಿ (ಕಾನೂನು ಹಾಗೂ ಸುವ್ಯವಸ್ಥೆ) ಪ್ರವೀಣ್ ಕುಮಾರ್, ಇದಕ್ಕೆ ಸಂಬಂಧಿಸಿ ಎತಾಹ್ನಲ್ಲಿ ನಿಯೋಜಿಸಲಾಗಿದ್ದ 2011ನೇ ಬ್ಯಾಚ್ನ ಪೊಲೀಸ್ ಕಾನ್ಸ್ಟೆಬಲ್ ಸರ್ವೇಶ್ ಚೌಧುರಿ ಅವರನ್ನು ಅಮಾನತು ಮಾಡಲಾಗಿದೆ. ತಿವಾರಿ ಹತ್ಯೆ ಪ್ರಕರಣದ ಕುರಿತು ಕ್ರಮ ತೆಗೆದುಕೊಂಡ ಪೊಲೀಸರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಆರಂಭಿಸಿದ ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದರು. ತಿವಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲ ತಾಣದಲ್ಲಿ ಪ್ರಚಾರ ನಡೆಸುತ್ತಿರುವ ಅನಾಮಿಕ ಪೊಲೀಸರ ವಿರುದ್ಧ ಹಝ್ರತ್ಗಂಝ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ಕುಮಾರ್ ಹೇಳಿದ್ದಾರೆ.
ನೇಮಕಾತಿ ಪರೀಕ್ಷೆಯಲ್ಲಿ ಭ್ರಷ್ಟಾಚಾರ ನಡೆಸಿರುವುದು ಪತ್ತೆಯಾದ ಬಳಿಕ 2012ರಲ್ಲಿ ಅಮಾನತುಗೊಂಡ ಕಾನ್ಸ್ಟೆಬಲ್ ಒಬ್ಬರು ಕ್ರಿಮಿನಲ್ಗಳೊಂದಿಗೆ ಸೇರಿ ಪೊಲೀಸ್ ಪಡೆಯ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ಅಂತಹ ಕ್ರಿಮಿನಲ್ಗಳನ್ನು ಗುರುತಿಸಲಾಗುವುದು ಹಾಗೂ ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕುಮಾರ್ ಹೇಳಿದ್ದಾರೆ.