ಕಂದಕಕ್ಕೆ ಉರುಳಿದ ಬಿಯರ್ ಸಾಗಾಟದ ಟ್ರಕ್: ಬಿಯರ್ ಬಾಟಲಿ ಹೊತ್ತೊಯ್ದ ಉತ್ತರ ಪ್ರದೇಶ ಪೊಲೀಸರು!
ಲಕ್ನೋ, ಅ.6: ಬಿಯರ್ ಬಾಟಲಿಗಳನ್ನು ಹೊತ್ತ ಟ್ರಕ್ಕೊಂದು ಉತ್ತರ ಪ್ರದೇಶದ ಹಥ್ರಸ್ ಜಿಲ್ಲೆ ನಗ್ಲಾ ರತ್ನಾ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ 93ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕವೊಂದಕ್ಕೆ ಉರುಳಿ ಬಿದ್ದಿದ್ದು ಸ್ಥಳೀಯರಿಗೆ ಬಿಯರ್ ಹಬ್ಬವಾಗಿ ಪರಿಣಮಿಸಿದೆ.
ಜನರು ತಾವು ತಂದ ಚೀಲಗಳಲ್ಲಿ ಆದಷ್ಟು ಬಿಯರ್ ಬಾಟಲಿಗಳನ್ನು ತುಂಬಿಸಿಕೊಂಡು ನಗುತ್ತಾ ಮನೆಯತ್ತ ನಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲ ಪೊಲೀಸರೂ ಕೈಗೆ ಸಿಕ್ಕಿದಷ್ಟು ಬಿಯರ್ ಬಾಟಲಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಬಗ್ಗೆ ಕೆಲವರು ಪ್ರಶ್ನಿಸಿದಾಗ ಸ್ಥಳಕ್ಕೆ ಜನರು ಧಾವಿಸಿ ಬಿಯರ್ ಬಾಟಲಿಗಳನ್ನು ಕೊಂಡು ಹೋಗದಂತೆ ಮಾಡಲು ತಾವು ಹೀಗೆ ಮಾಡುತ್ತಿರುವುದಾಗಿ ಪೊಲೀಸರು ಸಬೂಬು ನೀಡಿದ್ದಾರೆ.
ಅಪಘಾತದಿಂದ ಗಾಯಗೊಂಡ ಟ್ರಕ್ ಚಾಲಕ ಮತ್ತು ಕ್ಲೀನರ್ ನನ್ನು ಕೂಡಲೇ ಆಲಿಘರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಕ್ ಆಲಿಘರ್ ನಿಂದ ಆಗ್ರಾದತ್ತ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಶಾಲಾ ಬಸ್ ಒಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಟ್ರಕ್ ಚಾಲಕ ಯತ್ನಿಸಿದಾಗ ಈ ಅಪಘಾತ ಸಂಭವಿಸಿದೆ.