ರಾಜಕೀಯ ಕ್ಷೇತ್ರ ಪ್ರವೇಶಿಸಲಿರುವ ಸಿಬಿಐ ಮಾಜಿ ಜಂಟಿ ನಿರ್ದೇಶಕ
ತಿರುಪತಿ, ಅ.6: ಶೀಘ್ರದಲ್ಲೇ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುವುದಾಗಿ ಸಿಬಿಐ ಮಾಜಿ ಜಂಟಿ ನಿರ್ದೇಶಕ ವಿ.ವಿ. ಲಕ್ಷ್ಮೀನಾರಾಯಣ ಶನಿವಾರ ತಿಳಿಸಿದ್ದಾರೆ. ಸತ್ಯಂ ಹಗರಣದ ತನಿಖೆ ನಡೆಸಿದ್ದ 1990ರ ಬ್ಯಾಚ್ನ ಐಪಿಎಸ್ ಅಧಿಕಾರಿ ಲಕ್ಷ್ಮೀನಾರಾಯಣ ಈ ವರ್ಷದ ಮಾರ್ಚ್ನಲ್ಲಿ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದು ಇದು ಸ್ವೀಕೃತವಾಗಿದೆ.
ಆಂಧ್ರಪ್ರದೇಶದ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯನಾಗಲಿದ್ದೇನೆ. ಸ್ವಂತ ಪಕ್ಷ ಸ್ಥಾಪಿಸುವ ಅಥವಾ ಇತರ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಬಗ್ಗೆ ಶೀಘ್ರ ನಿರ್ಧರಿಸುತ್ತೇನೆ. ದೇಶದಲ್ಲಿ ರೈತರು, ನೇಕಾರರು, ಮೀನುಗಾರರು ಪಡುತ್ತಿರುವ ಬವಣೆಯನ್ನು ಕಂಡು, ಹಳ್ಳಿಗಳ ಗತವೈಭವವನ್ನು ಮರಳಿಸುವ ಉದ್ದೇಶದಿಂದ ರಾಜಕೀಯ ಕ್ಷೇತ್ರ ಪ್ರವೇಶಿಸುವುದಾಗಿ ಅವರು ಹೇಳಿದ್ದಾರೆ. ಆಂಧ್ರಪ್ರದೇಶದ 13 ಜಿಲ್ಲೆಗಳ ಹಲವು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯ ಜನರಿಂದ ಮಾಹಿತಿ ಪಡೆದು ರೂಪಿಸಲಾಗಿರುವ ಜನತೆಯ ಪ್ರಣಾಳಿಕೆಯನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಇತರ ಮುಖಂಡರಿಗೆ ಸಲ್ಲಿಸಿ ಅವರ ಪ್ರತಿಕ್ರಿಯೆ ಪಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.