ಪ್ರಧಾನಿ ಮೋದಿ, ಆರೆಸ್ಸೆಸ್ ನಾಯಕ ಭಾಗವತ್ ವಿರುದ್ಧ ಪ್ರವೀಣ್ ತೊಗಾಡಿಯಾ ವಾಗ್ದಾಳಿ
"ಆರೆಸ್ಸೆಸ್ ಗೆ ರಾಮ ಮಂದಿರ ನಿರ್ಮಾಣದ ಆಸಕ್ತಿಯಿಲ್ಲ"
ನಾಗ್ಪುರ, ಅ.7: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಮಾಜಿ ನಾಯಕ ಪ್ರವೀಣ್ ತೊಗಾಡಿಯಾ ಪ್ರಧಾನಿ ಮೋದಿ ಮತ್ತು ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಹಿಂದೂ ರಾಷ್ಟ್ರವೆಂದರೆ ಅಲ್ಲಿ ಮುಸ್ಲಿಮರಿಗೆ ಜಾಗ ಇಲ್ಲ ಎಂದು ಅರ್ಥವಲ್ಲ” ಎಂದು ಹೇಳಿಕೆ ನೀಡಿದ್ದ ಭಾಗವತ್ ವಿರುದ್ಧ ತೊಗಾಡಿಯಾ ಕಿಡಿಕಾರಿದರು. “ಹಿಂದೂ ರಾಷ್ಟ್ರವೆಂದರೆ ಅಲ್ಲಿ ಮುಸ್ಲಿಮರಿಗೆ ಜಾಗವಿಲ್ಲ ಎಂದರ್ಥವಲ್ಲ. ಹಾಗೆ ಹೇಳಿದರೆ ಹಿಂದುತ್ವಕ್ಕೆ ಅರ್ಥವೇ ಇಲ್ಲ” ಎಂದು ಮೋಹನ್ ಭಾಗವತ್ ಆರೆಸ್ಸೆಸ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
“ಗೋಹತ್ಯೆ ಮಾಡುವವರನ್ನು ಹೊರತುಪಡಿಸಿ, ಲವ್ ಜಿಹಾದಿಗಳನ್ನು ಹೊರತುಪಡಿಸಿ ಹಿಂದುತ್ವವಿಲ್ಲವೇ ಎಂದು ನಾನು ಕೇಳಲು ಇಚ್ಛಿಸುತ್ತೇನೆ” ಎಂದು ತೊಗಾಡಿಯ ಹೇಳಿದರು. “ನಾವು 52 ವರ್ಷಗಳ ಹಿಂದೆ ಹಿಂದೂ ಸಂಘಟನೆಯಾಗಿರಬೇಕೆಂದು ಪರಿಗಣಿಸಿ 52 ವರ್ಷಗಳ ಹಿಂದೆ ಆರೆಸ್ಸೆಸ್ ಸೇರಿದ್ದೆವು. ಆದರೆ ಇದೀಗ ಅದು ಮುಸ್ಲಿಮ್ ಸಮುದಾಯದ ಹಿತಾಸಕ್ತಿಗಳ ಬಗ್ಗೆ ಮಾತ್ರ ಕಾಳಜಿ ಹೊಂದಿದೆ ಎಂದು ಎನಿಸುತ್ತಿದೆ” ಎಂದವರು ಹೇಳಿದರು.
“ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹೋರಾಟವನ್ನು ಮುಂದುವರಿಸಲು ಆರೆಸ್ಸೆಸ್ ಆಸಕ್ತಿ ಹೊಂದಿಲ್ಲ. ಪ್ರಧಾನಿ ಮೋದಿ ಮುಸ್ಲಿಮರನ್ನು ಓಲೈಸುತ್ತಿದ್ದು, ರಾಮ ಮಂದಿರವನ್ನು ಮರೆತಿದ್ದಾರೆ” ಎಂದವರು ಹೇಳಿದರು.