ರಾಮಮಂದಿರ ನಿರ್ಮಿಸದಿದ್ದರೆ ಅಧಿಕಾರ ನಷ್ಟ: ಬಿಜೆಪಿಗೆ ಶಿವಸೇನೆ ಎಚ್ಚರಿಕೆ
ಮುಂಬೈ, ಅ.9: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಷಯದಲ್ಲಿ ಪ್ರಧಾನಿ ಮೋದಿಯ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿರುವ ಶಿವಸೇನೆ, ರಾಮಮಂದಿರ ನಿರ್ಮಾಣವಾಗದಿದ್ದಲ್ಲಿ ಬಿಜೆಪಿ ಅಧಿಕಾರದಿಂದ ಕೆಳಗಿಳಿಯಲಿದೆ ಎಂದಿದೆ.
ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ ‘ರಾಮ್ ಮಂದಿರ್ ಬನಾವೊ, ನಹಿ ತೊ ರಾಮ್ ನಾಮ್ ಸತ್ಯ ಹೈ’ (ರಾಮ ಮಂದಿರ ನಿರ್ಮಿಸಿ, ಇಲ್ಲದಿದ್ದರೆ ಮುಕ್ತಿ ಸಿಗುತ್ತದೆ) ಎಂಬ ತಲೆಬರಹದಡಿ ಪ್ರಕಟವಾಗಿರುವ ಲೇಖನದಲ್ಲಿ ಮಂದಿರ ನಿರ್ಮಾಣ ವಿಷಯ ಕೇವಲ ಚುನಾವಣಾ ಭರವಸೆಯಾಗಿಯೇ ಉಳಿದುಕೊಂಡಿದೆ. ಅಲ್ಲದೆ ಹಿಂದುತ್ವವನ್ನು ಹಾಸ್ಯಾಸ್ಪದವಾಗಿಸಿದ ವಿಷಯವಾಗಿ ಬಿಟ್ಟಿದೆ ಎಂದು ತಿಳಿಸಲಾಗಿದೆ.
ಕೇಂದ್ರದಲ್ಲಿ ಮತ್ತು ಉ.ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಶೀಘ್ರದಲ್ಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ ಎಂಬ ವಿಶ್ವಾಸ ಮೂಡಿತ್ತು. ಆದರೆ ಏನೂ ಆಗಲಿಲ್ಲ. ಈಗ ಮೋದಿ ಅಥವಾ ಇತರ ಹಿಂದುತ್ವವಾದಿಗಳು ಈ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಸರಕಾರದ ಭರವಸೆಯನ್ನು ನೆನಪಿಸಿದವರಿಗೆ ತೊಂದರೆ ನೀಡಲಾಗುತ್ತದೆ. ಇನ್ನಾದರೂ ಈ ವಿಷಯವನ್ನು ಪ್ರಧಾನಿ ಮೋದಿ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಶಿವಸೇನೆ ಹೇಳಿದೆ.