ತನುಶ್ರೀ ದತ್ತಾ ದೂರು: ಪಾಟೇಕರ್ ಸೇರಿದಂತೆ ಮೂವರಿಗೆ ನೋಟಿಸ್
ಮುಂಬೈ,ಅ.10: ನಟಿ ತನುಶ್ರೀ ದತ್ತಾ ಸಲ್ಲಿಸಿರುವ ಲೈಂಗಿಕ ಕಿರುಕುಳ ದೂರಿಗೆ ಸಂಬಂಧಿಸಿದಂತೆ ಬಾಲಿವುಡ್ ನಟ ನಾನಾ ಪಾಟೇಕರ್, ನಿರ್ಮಾಪಕ ಸಮೀ ಸಿದ್ದಿಕಿ, ನೃತ್ಯ ನಿರ್ದೇಶಕ ಗಣೇಶ ಆಚಾರ್ಯ ಮತ್ತು ನಿರ್ದೇಶಕ ರಾಕೇಶ ಸಾರಂಗ್ ಅವರಿಗೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗವು ನೋಟಿಸ್ಗಳನ್ನು ಹೊರಡಿಸಿದ್ದು,10 ದಿನಗಳಲ್ಲಿ ಉತ್ತರಿಸುವಂತೆ ನಿರ್ದೇಶ ನೀಡಿದೆ.
ಈ ವಿಷಯವನ್ನು ತಿಳಿಸಿದ ಆಯೋಗದ ಅಧ್ಯಕ್ಷೆ ವಿಜಯಾ ರಾಹತ್ಕರ್ ಅವರು, ದತ್ತಾ ಅವರ ದೂರಿಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಮುಂಬೈ ಪೊಲೀಸರಿಗೂ ತಿಳಿಸಲಾಗಿದೆ ಎಂದು ಹೇಳಿದರು.
2008ರಲ್ಲಿ ‘ಹಾರ್ನ್ ಒಕೆ ಪ್ಲೀಸ್’ ಚಿತ್ರದ ಹಾಡೊಂದರ ಚಿತ್ರೀಕರಣದ ಸಂದರ್ಭದಲ್ಲಿ ಪಾಟೇಕರ್ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಈ ಬಗ್ಗೆ ತಾನು ಇತರ ಆರೋಪಿಗಳಲ್ಲಿ ದೂರಿಕೊಂಡಿದ್ದರೂ ಅವರು ಸ್ಪಂದಿಸಿರಲಿಲ್ಲ ಎಂದು ಶನಿವಾರ ಒಶಿವಾರಾ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿರುವ ದತ್ತಾ,ಆಯೋಗದ ಹಸ್ತಕ್ಷೇಪವನ್ನು ಕೋರಿದ್ದರು. ಪಾಟೇಕರ್ ತನ್ನ ವಿರುದ್ಧದ ಆರೋಪವನ್ನು ತಳ್ಳಿ ಹಾಕಿದ್ದಾರೆ.