ತಿತ್ಲಿ ಅಬ್ಬರಕ್ಕೆ ಒಡಿಶಾ, ಆಂಧ್ರ ತತ್ತರ
ಭುವನೇಶ್ವರ, ಅ. 11: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಎದ್ದಿರುವ "ಅತ್ಯಂತ ತೀವ್ರ ಚಂಡಮಾರುತ" ಇದೀಗ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಗಂಟೆಗೆ 165 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿರುವ ಚಂಡಮಾರುತ ಒಡಿಶಾ ರಾಜ್ಯ ತತ್ತರಿಸುವಂತೆ ಮಾಡಿದೆ.
ಹಲವು ಕಡೆಗಳಲ್ಲಿ ವ್ಯಾಪಕ ಭೂಕುಸಿತಗಳು ಸಂಭವಿಸಿದ್ದು, ಕರಾವಳಿಯ ಐದು ಜಿಲ್ಲೆಗಳ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸರ್ಕಾರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.
ಒಡಿಶಾದ ಗೋಪಾಲಪುರ ಮತ್ತು ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ವ್ಯಾಪಕ ಭೂಕುಸಿತ ಸಂಭವಿಸಿದ್ದು, ಗುರುವಾರ ಆಂಧ್ರಪ್ರದೇಶದ ಕಳಿಂಗಪಪಟ್ಟಣಂಗೆ ಅಪ್ಪಳಿಸುವ ನಿರೀಕ್ಷೆ ಇದೆ. ಒಡಿಶಾದ ಗಂಜಮ್ ಜಿಲ್ಲೆಯಲ್ಲಿ ವ್ಯಾಪಕ ನಷ್ಟ ಸಂಭವಿಸಿದೆ. ಬೆರ್ಹ್ರಾಪುರ- ಗೋಪಾಲಪುರ ಹೆದ್ದಾರಿಯಲ್ಲಿ ಮರಗಳು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.
ಆಂಧ್ರದ ಶ್ರೀಕಾಕುಲಂನಿಂದ ಇಚ್ಚಾಪುರಂ ವರೆಗೆ ರೈಲು ಹಾಗೂ ರಸ್ತೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಇಡೀ ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಟೆಲಿಕಾನ್ಫರೆನ್ಸ್ ಮೂಲಕ ಶ್ರೀಕಾಕುಲಂ ಅಧಿಕಾರಿಗಳ ಜತೆ ಚರ್ಚಿಸಿದ್ದು, ಸಂಜೆ ವೇಳೆ ಜಿಲ್ಲೆಗೆ ಭೇಟಿ ನೀಡುವ ನಿರೀಕ್ಷೆ ಇದೆ.
ಶ್ರೀಕಾಕುಲಂ ಜಿಲ್ಲೆಯ ಇಚ್ಚಾಪುರ, ಕವಿತಿ, ಪಲಾಸ ತಾಲೂಕುಗಳಲ್ಲಿ 200 ಮಿಲೀಮೀಟರ್ಗಿಂತಲೂ ಅಧಿಕ ಮಳೆ ಸುರಿದಿದೆ.