ದುಷ್ಕರ್ಮಿಗಳ ತಂಡದಿಂದ ಪತ್ರಕರ್ತನ ಮೇಲೆ ಹಲ್ಲೆ
ಮುಂಬೈ, ಅ.14: ದಕ್ಷಿಣ ಮುಂಬೈನಲ್ಲಿ ದುಷ್ಕರ್ಮಿಗಳ ತಂಡವೊಂದು ಟಿವಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದೆ.
ಖಾಸಗಿ ಟಿವಿ ಚಾನಲ್ನಲ್ಲಿ ಕೆಲಸ ಮಾಡುತ್ತಿರುವ ಹರ್ಮನ್ ಗೋಮ್ಸ್ ಶನಿವಾರ ತಡರಾತ್ರಿ ತನ್ನ ಸ್ನೇಹಿತನೊಂದಿಗೆ ಟ್ಯಾಕ್ಸಿಯಲ್ಲಿ ಮನೆಗೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
‘‘ಗೋಮ್ಸ್ ಅವರು ರಾತ್ರಿ ಸುಮಾರು 1:30ರ ವೇಳೆಗೆ ಗಾಂವ್ದೇವಿ ಪ್ರದೇಶದಲ್ಲಿರುವ ತನ್ನ ಮನೆ ಬಳಿ ಕ್ಯಾಬ್ನಿಂದ ಕೆಳಗಿಳಿದಾಗ ನಾಲ್ಕರಿಂದ ಆರು ಜನರು ಗೋಮ್ಸ್ ಬರುವಿಕೆಗಾಗಿ ಕಾದು ಕುಳಿತ್ತಿದ್ದರು. ಮೊದಲಿಗೆ ಗೋಮ್ಸ್ಗೆ ನಿಂದಿಸತೊಡಗಿದ ಗುಂಪು ಆ ಬಳಿಕ ಅವರ ಮುಖಕ್ಕೆ ಹಲ್ಲೆ ನಡೆಸಿ ಪರಾರಿಯಾಗಿದೆ" ಎಂದು ಉಪ ಪೊಲೀಸ್ ಕಮಿಶನರ್ ಧ್ಯಾನೇಶ್ವರ ಚವಾಣ್ ಹೇಳಿದ್ದಾರೆ.
ಈ ದಾಳಿಯ ಹಿಂದೆ ಯಾರಿದ್ದಾರೆಂದು ಇನ್ನೂ ಗೊತ್ತಾಗಿಲ್ಲ. ಘಟನೆಯ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಪತ್ರಕರ್ತ ಸಂಘ ದಾಳಿಯನ್ನು ಖಂಡಿಸಿದ್ದು ಪೊಲೀಸರು ಸಂತ್ರಸ್ತ ನೀಡಿದ್ದ ದೂರನ್ನು ಸರಿಯಾಗಿ ದಾಖಲಿಸಿಕೊಂಡಿಲ್ಲ ಎಂದು ದೂರಿದೆ. ಪತ್ರಕರ್ತ ಗೋಮ್ಸ್ ಮೇಲಿನ ದಾಳಿಯನ್ನು ಮುಂಬೈ ಪ್ರೆಸ್ ಕ್ಲಬ್ ತೀವ್ರವಾಗಿ ಖಂಡಿಸಿ ಹಲ್ಲೆಕೋರರನ್ನು ಬೇಗನೆ ಬಂಧಿಸುವಂತೆ ಆಗ್ರಹಿಸಿದೆ.