ವ್ಯಾಪಂ ಹಗರಣದಲ್ಲಿ ತನಿಖೆ ಎದುರಿಸುತ್ತಿದ್ದ ಕಿರಿಯ ವೈದ್ಯೆ ಸಾವು
ಲಕ್ನೋ, ಅ.16: ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿದ್ದ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ ಇಲ್ಲಿನ ಕಿರಿಯ ವೈದ್ಯೆ ಡಾ. ಮನೀಶಾ ಶರ್ಮ ವಿಪರೀತ ಪ್ರಮಾಣದ ಅನೆಸ್ತೀಶಿಯಾ ಔಷಧಿಯಿದ್ದ ಇಂಜೆಕ್ಷನ್ ಅನ್ನು ಸ್ವಯಂ ಚುಚ್ಚಿಕೊಂಡು ಸಾವನ್ನಪ್ಪಿದ್ದಾರೆ.
ಔಷಧಿ ಓವರ್ ಡೋಸ್ ನಿಂದಾಗಿ ಅವರು ಎರಡು ದಿನಗಳಿಗೂ ಹೆಚ್ಚು ಕಾಲ ಆಸ್ಪತ್ರ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದರು. ಆಕೆಯ ಸಾವಿಗೆ ಸಂಬಂಧಿಸಿದಂತೆ ಆಕೆಯ ಕುಟುಂಬ ಸದಸ್ಯರು ಆಸ್ಪತ್ರೆಯ ಯುರಾಲಜಿ ವಿಭಾಗದ ಹಿರಿಯ ವೈದ್ಯ ಉಧಮ್ ಸಿಂಗ್ ಅವರ ವಿರುದ್ಧ ವಝೀರ್ ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅವರು ಮನೀಶಾರಿಗೆ ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿದೆ.
ತನಿಖೆ ನಡೆಸಿದ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಶರ್ಮ ಕಿರಿಯ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವಾಗಲೇ ವೈದ್ಯಕೀಯ ಉನ್ನತ ವ್ಯಾಸಂಗವನ್ನೂ ಮಾಡುತ್ತಿದ್ದರು. ಆದರೆ ಆಕೆಗೆ ಕಿರುಕುಳ ನೀಡಲಾಗಿತ್ತೇ ಎಂಬ ವಿಚಾರದಲ್ಲಿ ಆಸ್ಪತ್ರೆಯ ಇತರ ಸಿಬ್ಬಂದಿ ತಮಗೆ ತಿಳಿದಿಲ್ಲವೆಂದು ಹೇಳುತ್ತಿದ್ದಾರೆ