ಇಂದು ಕೇರಳ ಬಂದ್: ಪಂಪಾ, ನಿಲಕ್ಕಲ್ನಲ್ಲಿ ಬಿಗಿ ಭದ್ರತೆ
ತಿರುವನಂತಪುರಂ, ಅ.18: ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸುಪ್ರೀಂಕೋರ್ಟ್ನ ಆದೇಶವನ್ನು ಅನುಷ್ಠಾನಗೊಳಿಸಲು ಕೇರಳ ಸರಕಾರ ಕ್ರಮ ಕೈಗೊಂಡಿರುವುದನ್ನು ಪ್ರತಿಭಟಿಸಿ ಕರೆ ನೀಡಲಾಗಿದ್ದ ಕೇರಳ ಬಂದ್ ಬುಧವಾರ ಮಧ್ಯರಾತ್ರಿಯೇ ಆರಂಭವಾಗಿದೆ.
ಶಬರಿಮಲೆ ಸಂರಕ್ಷಣಾ ಸಮಿತಿ ಹಾಗೂ ಮಾಜಿ ವಿಶ್ವ ಹಿಂದೂ ಪರಿಷತ್(ವಿಎಚ್ಪಿ)ಅಧ್ಯಕ್ಷ ಪ್ರವೀಣ್ ತೊಗಾಡಿಯಾ ನೇತೃತ್ವದ ಅಂತರ್ರಾಷ್ಟ್ರೀಯ ಹಿಂದೂ ಪರಿಷತ್ ಗುರುವಾರ ಕೇರಳದಲ್ಲಿ 24 ಗಂಟೆಗಳ ಬಂದ್ ಕರೆ ನೀಡಿದ್ದವು. ಬಂದ್ಗೆ ಬಿಜೆಪಿ ಬೆಂಬಲ ನೀಡಿದೆ.
ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಿರುವ ಪೊಲೀಸ್ ಇಲಾಖೆ ಪಂಪಾ ಹಾಗೂ ನಿಲಕ್ಕಲ್ ಪ್ರದೇಶದಲ್ಲಿ 700 ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ. ಬುಧವಾರ ಶಬರಿಮಲೆಗೆ ತೆರಳುತ್ತಿದ್ದ ಇಬ್ಬರು ಮಹಿಳಾ ಭಕ್ತೆಯರು ಹಾಗೂ ಪತ್ರಕರ್ತರ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದರು. ಪ್ರತಿಭಟನೆ ತೀವ್ರಗೊಂಡಾಗ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಶಬರಿಮಲೆಯತ್ತ ಸಾಗುವ ಮಾರ್ಗವನ್ನು ಬಂದ್ ಮಾಡಿದ್ದರು.