ಪತ್ರಕರ್ತೆ ಪ್ರಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ: ವಿಚಾರಣೆ ಅ.31ಕ್ಕೆ ಮುಂದೂಡಿಕೆ
ಹೊಸದಿಲ್ಲಿ, ಅ.18: ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಸಂಪಾದಕ ಎಂಜೆ ಅಕ್ಬರ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಯನ್ನು ಇಂದು ಪಾಟಿಯಾಲ ಹೌಸ್ ಕೋರ್ಟ್ ಅಕ್ಟೋಬರ್ 31ಕ್ಕೆ ಮುಂದೂಡಿದೆ.
ಅಕ್ಬರ್ ಅವರು ತನಗೆ 20 ವರ್ಷಗಳ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪ್ರಿಯಾ ರಮಣಿ ಅವರು ಆರೋಪ ಹೊರಿಸಿದ್ದರು.
ಅಕ್ಬರ್ ಪರ ವಾದ ಮಂಡಿಸಿದ ಹಿರಿಯ ವಕೀಲೆ ಗೀತಾ ಲುಥ್ರಾ, ರಮಣಿ ಅವರು ಮಾಜಿ ವಿದೇಶಾಂಗ ರಾಜ್ಯ ಸಚಿವ ಅಕ್ಬರ್ ಬಗ್ಗೆ ಮಾಡಿರುವ ಹಲವು ಟ್ವೀಟ್ಗಳನ್ನು ಉಲ್ಲೇಖಿಸಿದರು. ಈ ಟ್ವೀಟ್ಗಳ ಅಕ್ಬರ್ ಅವರ ಘನತೆಗೆ ಧಕ್ಕೆ ಉಂಟು ಮಾಡಿವೆ. ಆಕೆ ಮಾಡಿರುವ ಎರಡನೇ ಟ್ವೀಟ್ ಸ್ಪಷ್ಟವಾಗಿ ಮಾನನಷ್ಟಕರವಾಗಿದ್ದು, ಇದನ್ನು 1200 ಜನರು ಲೈಕ್ ಮಾಡಿದ್ದರು ಎಂದು ವಾದ ಮಂಡಿಸಿದರು.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ವಕೀಲೆ ಗೀತಾ ಅವರ ವಾದವನ್ನು ಆಲಿಸಿ ಅರ್ಜಿಯ ವಿಚಾರಣೆಯನ್ನು ಮುಂದೂಡಿದರು.
ಅಕ್ಬರ್ ವಿರುದ್ಧ ಹಲವು ಮಹಿಳೆಯರು ಲೈಂಗಿಕ ಕಿರುಕುಳ ಆರೋಪ ಹೊರಿಸಿದ ಕಾರಣ ಬುಧವಾರ ವಿದೇಶಾಂಗ ವ್ಯವಹಾರ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.