ಗಣರಾಜ್ಯೋತ್ಸವದಿನವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಆದಿತ್ಯನಾಥ್ ಸರಕಾರದ ಸಿದ್ಧತೆ !
ಲಖ್ನೋ,ಅ.22: ಪಕ್ಷದ ಚುನಾವಣಾ ಚಿಹ್ನೆಯಾದ ಕಮಲದ ಆಕಾರದ ವಿದ್ಯುತ್ ದೀಪಗಳನ್ನು ವಿವಿಧ ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ಜನವರಿ 26ರ ಸಂಜೆ ಉರಿಸಲು ಮನವಿ ಮಾಡುವ ಮೂಲಕ ಉತ್ತರ ಪ್ರದೇಶ ಸರಕಾರ ಗಣರಾಜ್ಯೋತ್ಸವದ ದಿನದಂದು ಮೂರು ಲಕ್ಷ ಕಮಲಗಳನ್ನು ಉರಿಸಲು ಸಿದ್ಧತೆ ನಡೆಸಿದೆ.
ಮುಂದಿನ ಗಣರಾಜ್ಯೋತ್ಸವವನ್ನು ರಾಜ್ಯದಲ್ಲಿ ಪಕ್ಷವು ಕಮಲ್ ಜ್ಯೋತಿ ವಿಕಾಸ್ ಅಭಿಯಾನದಡಿ ಮಾದರಿ ರೀತಿಯಲ್ಲಿ ಆಚರಿಸುವುದಾಗಿ ಉತ್ತರ ಪ್ರದೇಶದ ಬಿಜೆಪಿ ವಕ್ತಾರ ಅಲೋಕ್ ಅವಸ್ಥಿ ತಿಳಿಸಿದ್ದಾರೆ. ಈ ಯೋಜನೆಯಡಿ ಬಿಜೆಪಿ ಕಾರ್ಯಕರ್ತರು, ಗೃಹ,ವಿದ್ಯುತ್,ಅಡುಗೆ ಅನಿಲ,ಆರೋಗ್ಯ, ವಿಮೆ ಮತ್ತು ಸ್ವ ಉದ್ಯೋಗಗಳಿಗೆ ಸರಕಾರಿ ಯೋಜನೆಗಳಡಿ ಸಾಲಪಡೆದ ಮೂರು ಕೋಟಿ ಫಲಾನುಭವಿ ಕುಟುಂಬಗಳಿಗೆ ತೆರಳಿ ಕಮಲದ ಆಕಾರದ ದೀಪ ಮತ್ತು ಸರಕಾರದ ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ಹೊಂದಿರುವ ಪ್ರತಿಯನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ದೀಪಗಳನ್ನು ಜನವರಿ 26,2019ರಂದು ನಿಗದಿತ ಸಮಯಕ್ಕೆ ಉರಿಸುವ ಮೂಲಕ 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಪ್ರತಿಜ್ಞೆ ಮಾಡುವಂತೆ ವಿನಂತಿಸಲಾಗುವುದು ಎಂದು ಅವಸ್ಥಿ ತಿಳಿಸಿದ್ದಾರೆ.