ಡಾಟಿ ಮಹಾರಾಜ್ ವಿರುದ್ಧ ಸಿಬಿಐ ಮೊಕದ್ದಮೆ
ಹೊಸದಿಲ್ಲಿ,ಅ.26: ತನ್ನ ಅಶ್ರಮವಾಸಿಗಳ ಮೇಲೆ ಅತ್ಯಾಚಾರ ಹಾಗೂ ಅನೈಸರ್ಗಿಕ ಲೈಂಗಿಕಕ್ರಿಯೆಯನ್ನು ನಡೆಸಿದ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ಡಾಟಿ ಮಹಾರಾಜ್ ವಿರುದ್ಧ ಸಿಬಿಐ ಶುಕ್ರವಾರ ಮೊಕದ್ದಮೆ ದಾಖಲಿಸಿದೆ.
ದಕ್ಷಿಣ ದಿಲ್ಲಿಯಲ್ಲಿ ದೇವಾಲಯವೊಂದನ್ನು ನಡೆಸುತ್ತಿರುವ ಡಾಟಿ ಮಹಾ ರಾಜ್ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ದಿಲ್ಲಿ ಹೈಕೋರ್ಟ್ ಸಿಬಿಐಗೆ ಆದೇಶಿಸಿತ್ತು.
ಡಾಟಿ ಮಹಾರಾಜ್ ಅತ್ಯಾಚಾರ ಹಾಗೂ ಅನೈಸರ್ಗಿಕ ಲೈಂಗಿಕ ಕ್ರಿಯೆ ಎಸಗಿದ್ದಾನೆ ಅವರ ಶಿಷ್ಯೆಯೊಬ್ಬರು ದಕ್ಷಿಣ ದಿಲ್ಲಿಯ ಫತೇಹ್ಪುರ ಬೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕೆಂಬ ದೂರುದಾರ ಮಹಿಳೆಯ ಮನವಿಗೆ ಮುಖ್ಯ ನ್ಯಾಯಾಧೀಶ ರಾಜೇಂದ್ರ ಮೆನನ್ ಹಾಗೂ ನ್ಯಾಯಮೂರ್ತಿ ವಿ.ಕೆ. ರಾವ್ ಅವರನ್ನೊಳಗೊಂಡ ನ್ಯಾಯಪೀಠವು ಸಮ್ಮತಿಸಿದೆ. ದಿಲ್ಲಿ ಪೊಲೀಸರು ನಡೆಸುತ್ತಿರುವ ತನಿಖೆಯು ಸಂದೇಹಾಸ್ಪದವಾಗಿದೆ. ಆದುದರಿಂದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಅರ್ಜಿದಾರ ಮಹಿಳೆಯು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.