ರಜನೀಕಾಂತ್ ಕೋಮುಶಕ್ತಿಗಳ ಕೈಗೊಂಬೆ: ಡಿಎಂಕೆ ಆರೋಪ
ರಜನೀಕಾಂತ್
ಚೆನ್ನೈ, ಅ.27: ರಜನೀಕಾಂತ್ ಕೋಮುಶಕ್ತಿಗಳ ಕೈಗೊಂಬೆಯಾಗಿದ್ದು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಡಿಎಂಕೆ ಆರೋಪಿಸಿದೆ. ಹಣ ಅಥವಾ ಅಧಿಕಾರದ ಪ್ರಲೋಭನೆಯಿಲ್ಲದೆ ರಾಜಕಿಯದ ಕ್ಷಿತಿಜದಲ್ಲಿ ಬದಲಾವಣೆಯನ್ನು ತರುವ ನಿರ್ಧಾರಕ್ಕೆ ತಾನು ಬದ್ಧನಾಗಿರುವುದಾಗಿ ತನ್ನ ಬೆಂಬಲಿಗರ ಸಂಘ ‘ರಜನಿ ಮಕ್ಕಳ್ ಮಂಡ್ರಮ್’ನ ಸದಸ್ಯರಿಗೆ ರಜನೀಕಾಂತ್ ಮಂಗಳವಾರ ತಿಳಿಸಿದ್ದರು. ಅಲ್ಲದೆ ರಾಜಕೀಯ ಸ್ಥಾನಮಾನದಿಂದ ಹೇರಳ ಹಣ ಗಳಿಸಬಹುದೆಂದು ಯಾರು ಕೂಡಾ ಯೋಚಿಸುವುದು ಬೇಡ ಎಂದು ಹೇಳಿದ್ದರು.
ಈ ಹೇಳಿಕೆಯನ್ನು ಡಿಎಂಕೆ ಪಕ್ಷದ ಮುಖವಾಣಿ ‘ ಮುರಸೋಳಿ’ಯಲ್ಲಿ ಟೀಕಿಸಲಾಗಿದೆ. ರಜನೀಕಾಂತ್ಗೆ ಅಧಿಕಾರದ ಆಸೆಯಿಲ್ಲದಿದ್ದರೆ ಅವರೂ ಕ್ರಾಂತಿಕಾರಿ ಮುಖಂಡ ದಿವಂಗತ ಇ.ವಿ.ರಾಮಸ್ವಾಮಿ ಪೆರಿಯಾರ್ರಂತೆ ಆಂದೋಲನವನ್ನು ಆರಂಭಿಸಲಿ ಎಂದು ಸಲಹೆ ನೀಡಲಾಗಿದೆ. ರಾಮಸ್ವಾಮಿ ಚುನಾವಣಾ ರಾಜಕೀಯದಿಂದ ದೂರವಿದ್ದರು. “ ನಾವು(ಬೆಂಬಲಿಗರು) ನಿಮ್ಮ ಮೇಲೆ ವಿಶ್ವಾಸ ಇರಿಸಿದ್ದೆವು. ಆದರೆ ನೀವು ಕೆಲವರ ಕೈಗೊಂಬೆಯಾಗಿದ್ದು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದೀರಿ” ಎಂದು ಲೇಖನದಲ್ಲಿ ತಿಳಿಸಲಾಗಿದೆ. “ನಿಮಗೆ ರಾಜಕೀಯದ ಸ್ಥಾನಮಾನದ ಬಗ್ಗೆ ಆಸಕ್ತಿ ಇಲ್ಲವಾದರೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ನಿಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಘೋಷಣೆ ಮಾಡಿರುವುದೇಕೆ” ಎಂದು ಪ್ರಶ್ನಿಸಲಾಗಿದೆ. ಡಿಎಂಕೆಯ ಟೀಕೆಗೆ ಪ್ರತಿಕ್ರಿಯಿಸಿರುವ ರಜನೀಕಾಂತ್, ತನ್ನ ಮತ್ತು ಬೆಂಬಲಿಗರ ಮದ್ಯೆ ಒಡಕುಂಟು ಮಾಡಲು ಯಾವುದೇ ಶಕ್ತಿಗೂ ಸಾಧ್ಯವಾಗದು. ಗುರಿ ತಲುಪಲು ನಾವು ಯಾವುದೇ ಮಾರ್ಗದಲ್ಲಿ ಬೇಕಾದರೂ ಸಾಗಬಹುದು. ಆದರೆ ನ್ಯಾಯದ ಮಾರ್ಗ ಅದಾಗಿರಬೇಕು ಎಂದು ರಜನೀಕಾಂತ್ ಹೇಳಿದ್ದಾರೆ.